ಜರ್ಮನಿ ಓಪನ್ ಬ್ಯಾಡ್ಮಿಂಟನ್‌: ಮಿಥುನ್‌ ಕಣಕ್ಕೆ, ಹಿಂದೆ ಸರಿದ ಶ್ರೀಕಾಂತ್‌ ಮುಲೆಮ್‌, ಜರ್ಮನಿ: ಭಾರತದ ಲಕ್ಷ್ಯ ಸೇನ್ ಮತ್ತು ಮಿಥುನ್ ಮಂಜುನಾಥ್ ಅವರು ಜರ್ಮನಿ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಮಂಗಳವಾರ ಕ್ವಾಲಿಫೈಯರ್ಸ್ ಪಂದ್ಯಗಳು ಆರಂಭವಾಗಲಿದ್ದು, ಕಿದಂಬಿ ಶ್ರೀಕಾಂತ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಕಳೆದ ಆವೃತ್ತಿಯಲ್ಲಿ ಲಕ್ಷ್ಯ ಸೇನ್ ಇಲ್ಲಿ ಫೈನಲ್ ತಲುಪಿದ್ದರು. ಇತ್ತೀಚೆಗೆ ರಾಷ್ಟ್ರೀಯ ಚಾಂಪಿಯನ್ ಆಗಿರುವ ಕರ್ನಾಟಕದ ಮಿಥುನ್‌ ಅವರು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಟೂರ್ನಿಯಲ್ಲಿ ಆರನೇ ಶ್ರೇಯಾಂಕ ಪಡೆದಿರುವ ಲಕ್ಷ್ಯ, ಮೊದಲ ಸುತ್ತಿನಲ್ಲಿ ಫ್ರಾನ್ಸ್‌ನ ಕ್ರಿಸ್ಟೊ ಪೊಪೊವ್‌ ಅವರನ್ನು ಎದುರಿಸಲಿದ್ದಾರೆ. ಮೊದಲ ಪಂದ್ಯ ಗೆದ್ದರೆ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಆಟಗಾರನಿಗೆ ಅಗ್ರಶ್ರೇಯಾಂಕ ಹೊಂದಿರುವ ಮಲೇಷ್ಯಾದ ಲೀ ಜೀ ಜಿಯಾ ಎದುರಾಗುವ ಸಾಧ್ಯತೆಯಿದೆ. ಮಿಥುನ್‌ ಅವರು ಮೊದಲ ಪಂದ್ಯದಲ್ಲಿ ಸಿಂಗಪುರದ ಲೊಹ್ ಕೀನ್ ಯಿವ್ ಅವರಿಗೆ ಮುಖಾಮುಖಿಯಾಗಲಿದ್ದಾರೆ. ಯಿವ್‌ ಅವರು ಮಾಜಿ ವಿಶ್ವ ಚಾಂಪಿಯನ್ ಆಟಗಾರ. ಮಹಿಳಾ ಸಿಂಗಲ್ಸ್‌ನಲ್ಲಿ ಮಾಳವಿಕಾ ಬನ್ಸೋದ್‌, ಸೈನಾ ನೆಹ್ವಾಲ್, ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ– ಬಿ.ಸುಮೀತ್ ರೆಡ್ಡಿ ಕಣದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.