ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಆಳ್ವಾಸ್ ಕಾಲೇಜು ತಂಡಕ್ಕೆ ಚಾಂಪಿಯನ್ ಪಟ್ಟ ಬೆಂಗಳೂರು:ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ತಂಡ, ಭರತ್ ಸಾಯಿಕುಮಾರ್ ಸ್ಮಾರಕ ರಾಜ್ಯಮಟ್ಟದ ಬಾಲ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದುಕೊಂಡಿತು. ತುಮಕೂರು ಜಿಲ್ಲಾ ಬಾಲ್‌ ಬ್ಯಾಡ್ಮಿಂಟನ್ ಸಂಸ್ಥೆಯ ಸಹಯೋಗದಲ್ಲಿ ಗಾಂಧಿನಗರ ಸ್ಪೋರ್ಟ್ಸ್‌ ಕ್ಲಬ್ ಆಶ್ರಯದಲ್ಲಿ ತುಮಕೂರಿನ ಸಿದ್ಧಾರ್ಥ ಕಾಲೇಜು ಆವರಣದಲ್ಲಿ ನಡೆದ ಟೂರ್ನಿಯ ಫೈನಲ್‌ ಹಣಾಹಣಿಯಲ್ಲಿ ಆಳ್ವಾಸ್ ತಂಡ ಬೆಂಗಳೂರಿನ ಬನಶಂಕರಿ ಸ್ಪೋರ್ಟ್ಸ್ ಕ್ಲಬ್ ವಿರುದ್ದ 35-22, 35-14ರಲ್ಲಿ ಜಯ ಗಳಿಸಿತು. 24 ತಂಡಗಳು ಭಾಗವಹಿಸಿದ್ದ ಲೀಗ್–ನಾಕೌಟ್ ಮಾದರಿಯಟೂರ್ನಿಯ ಸೆಮಿಫೈನಲ್‌ನಲ್ಲಿ ಆಳ್ವಾಸ್ ತಂಡ ಸಹ್ಯಾದ್ರಿ ಸ್ಪೋರ್ಟ್ಸ್‌ ಕ್ಲಬ್ ವಿರುದ್ಧ 35-21, 35-18ರಲ್ಲಿ ಮಣಿಸಿತು. ಬನಶಂಕರಿ ತಂಡದವರು ಗಾಂಧಿನಗರ ಕ್ಲಬ್ ತಂಡವನ್ನು ಸೋಲಿಸಿದರು. ಗಾಂಧಿನಗರ ತಂಡ ಮೂರನೇ ಸ್ಥಾನ ಗಳಿಸಿತು. ಆಳ್ವಾಸ್‍ನ ಚೇತನ್ ಅತ್ಯುತ್ತಮ ಫ್ರಂಟ್ ಪ್ಲೇಯರ್, ಬನಶಂಕರಿ ತಂಡದ ತರುಣ್ ಅತ್ಯುತ್ತಮ ಬ್ಯಾಕ್ ಪ್ಲೇಯರ್ ಹಾಗೂ ಗಾಂಧಿನಗರ ಕ್ಲಬ್‍ನ ಪ್ರದೀಪ್ ಅತ್ಯುತ್ತಮ ಸೆಂಟರ್ ಪ್ಲೇಯರ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.