ಪ್ರೊ ಕಬಡ್ಡಿ ಲೀಗ್ ಟೂರ್ನಿ: ಬುಲ್ಸ್ ವಿರೋಚಿತ ಹೋರಾಟ ಬೆಂಗಳೂರು: ವಿರೋಚಿತ ಹೋರಾಟ ಮಾಡಿದ ಬೆಂಗಳೂರು ಬುಲ್ಸ್‌ ತಂಡವು ಮಂಗಳವಾರ ಇಲ್ಲಿ ನಡೆದ ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಪಟ್ನಾ ಪೈರೆಟ್ಸ್ ಎದುರು ಅಲ್ಪ ಅಂತರದಿಂದ ಸೋತಿತು. ವೈಟ್‌ಫೀಲ್ಡ್‌ನ ಗ್ರ್ಯಾಂಡ್‌ ಶೆರಟನ್ ಹೋಟೆಲ್‌ನಲ್ಲಿ ನಡೆದ ಪಂದ್ಯದಲ್ಲಿ ಪಟ್ನಾ ತಂಡವು 36–34ರಿಂದ ರೋಚಕ ಜಯ ಸಾಧಿಸಿತು. ಮೊದಲಾರ್ಧದ ವಿರಾಮದ ವೇಳೆಗೆ ಪಟ್ನಾ ತಂಡವು 19–14ರಿಂದ ಉತ್ತಮ ಮುನ್ನಡೆಯಲ್ಲಿತ್ತು. ನಂತರದ ಅವಧಿಯಲ್ಲಿ ತಿರುಗೇಟು ನೀಡಿದ ಬುಲ್ಸ್‌ ತಂಡವು ಕೊನೆಯ ನಿಮಿಷದವರೆಗೂ ಸಮಬಲದ ಪೈಪೋಟಿಯೊಡ್ಡಿತು. ವಿರಾಮದ ನಂತರ ಬುಲ್ಸ್‌ 20 ಅಂಕಗಳನ್ನುಮತ್ತು ಪಟ್ನಾ 17 ಅಂಕಗಳನ್ನು ಗಳಿಸಿದವು. ಬುಲ್ಸ್ ತಂಡದ ನಾಯಕ ಪವನ್ ಶೆರಾವತ್ 7, ಚಂದ್ರನ್ ರಂಜಿತ್ 8 ಪಾಯಿಂಟ್ಸ್‌ ಗಳಿಸಿದರು. ಇನ್ನೊಂದು ಪಂದ್ಯದ ಲ್ಲಿ;ರೇಡಿಂಗ್‌ನಲ್ಲಿ ಮಿಂಚಿದ ಅರ್ಜುನ್ ದೇಶ್ವಾಲ್ ಆಟದ ಬಲದಿಂದ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡವು ಯು ಮುಂಬಾ ಎದುರು ಭಾರಿ ಅಂತರದಿಂದ ಜಯಿಸಿತು. ಅರ್ಜುನ್ (17) ಮತ್ತು ಆಲ್‌ರೌಂಡರ್ ಬ್ರಿಜೇಂದ್ರ ಸಿಂಗ್ (8) ಅವರ ಅಮೋಘ ಆಟ ರಂಗೇರಿತು. ಮೊದಲಾರ್ಧದ ವಿರಾಮದ ವೇಳೆಗೆ ಪಿಂಕ್ ಪ್ಯಾಂಥರ್ಸ್ ತಂಡವು 17–14ರಿಂದ ಅಲ್ಪ ಮುನ್ನಡೆ ಗಳಿಸಿತ್ತು. ಆದರೆ ನಂತರದ ಆಟದಲ್ಲಿ ಮುಂಬಾ ತಂಡದ ಆಟಗಾರರು ಬಸವಳಿದರು. ವೇಗವಾಗಿ ಪಾಯಿಂಟ್ಸ್‌ ಗಳಿಸಿದ ಜೈಪುರ್ ಜಯಭೇರಿ ಬಾರಿಸಿತು. ಪಟ್ನಾ ತಂಡದ ಮೋನು ಗೋಯತ್ (9), ಡಿಫೆಂಡರ್ ಸುನಿಲ್ (6) ಮತ್ತು ಸಚಿನ್ (5) ತಂಡದ ಗೆಲುವಿಗೆ ಕಾಣಿಕೆ ನೀಡಿದರು. ಬುಧವಾರ ನಡೆಯುವ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್– ತಮಿಳ್ ತಲೈವಾಸ್‌ ಸೆಣಸಲಿವೆ. ಇನ್ನೊಂದು ಪಂದ್ಯದಲ್ಲಿ ತೆಲುಗು ಟೈಟನ್ಸ್ ಮತ್ತಯ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಗಳು ಸೆಣಸಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.