ಸ್ವಿಸ್‌ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್‌ಫೈನಲ್‌ಗೆ ಶ್ರೀಕಾಂತ್‌, ರಾಜಾವತ್‌ ಬಾಸೆಲ್‌ (ಸ್ವಿಜರ್ಲೆಂಡ್‌): ಎರಡು ಬಾರಿಯ ಒಲಿಂಪಿಕ್ ಪದಕವಿಜೇತೆ ಪಿ.ವಿ. ಸಿಂಧು ಮತ್ತು ಲಕ್ಷ್ಯ ಸೇನ್‌ ಅವರು ಸ್ವಿಸ್‌ ಓಪನ್ ಸೂಪರ್‌ 300 ಟೂರ್ನಿಯ ಸಿಂಗಲ್ಸ್‌ನಿಂದ ಹೊರಬಿದ್ದರು. ಆದರೆ ಕಿದಂಬಿ ಶ್ರೀಕಾಂತ್ ಮತ್ತು ಪ್ರಿಯಾಂಶು ರಾಜಾವತ್ , ಕಿರಣ್ ಜಾರ್ಜ್ ಅವರು ಗುರುವಾರ ತಡರಾತ್ರಿ ಎಂಟರ ಸುತ್ತಿಗೆ ದಾಪುಗಾಲಿಟ್ಟರು. ಅಲ್‌ ಇಂಗ್ಲೆಂಡ್ ಚಾಂಪಿಯನ್‌ಷಿಪ್ಸ್‌ನ ಎರಡನೇ ಸುತ್ತಿನಲ್ಲಿ ನಿರ್ಗಮಿಸಿದ್ದ ಸಿಂಧು, ಈ ಟೂರ್ನಿಯ ಮಹಿಳಾ ಸಿಂಗಲ್ಸ್‌ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವ ಜೂನಿಯರ್ ಚಾಂಪಿಯನ್, 17 ವರ್ಷದ ತಮೊಕಾ ಮಿಯಾಝಾಕಿ (ಜಪಾನ್‌) ಅವರಿಗೆ 21–16, 19–21, 16–21 ರಿಂದ ಸೋತರು. ಲಕ್ಷ್ಯ ಸೇನ್‌ ಇನ್ನೊಂದು ಪಂದ್ಯದಲ್ಲಿ 17–21, 15–21 ರಲ್ಲಿ ತೈವಾನ್‌ನ ಲೀ ಚಿಯಾ ಹಾವೊ ಅವರಿಗೆ ಕೇವಲ 38 ನಿಮಿಷಗಳಲ್ಲಿ ಶರಣಾದರು. ಆದರೆ ಮತ್ತೊಂದು ಪಂದ್ಯದಲ್ಲಿ ಶ್ರೀಕಾಂತ್‌ 21–16, 21–15 ರಿಂದ ಅಗ್ರ ಶ್ರೇಯಾಂಕದ ಲೀ ಝಿ ಜಿಯಾ (ಮಲೇಷ್ಯಾ) ಅವರನ್ನು ನೇರ ಗೇಮ್‌ಗಳಿಂದ ಹಿಮ್ಮೆಟ್ಟಿಸಿದರು. ರಾಜಾವತ್‌ ಅವರೂ ಪ್ರಿಕ್ವಾರ್ಟರ್‌ನಲ್ಲಿ ಚೀನದ ಲಿ ಲಾ ಷಿ ಅವರನ್ನು 21–14, 21–13 ರಿಂದ ಸೋಲಿಸಲು ಕಷ್ಟಪಡಲಿಲ್ಲ. ಕಿರಣ್ ಜಾರ್ಜ್ ಮಾತ್ರ ಹೋರಾಡಿ 18–21, 22–20, 21–18 ರಿಂದ ಫ್ರಾನ್ಸ್‌ನ ಅಲೆಕ್ಸ್‌ ಲೇನಿಯರ್ ಅವರನ್ನು ಸೋಲಿಸಿದರು. ಈ ಪಂದ್ಯ 71 ನಿಮಿಷಗಳ ಕಾಲ ನಡೆಯಿತು. ಎಂಟರ ಘಟ್ಟದ ಪಂದ್ಯಗಳಲ್ಲಿ ಲೀ ಚಿಯಾ–ಹಾವೊ ಅವರನ್ನು, ರಾಜಾವತ್‌, ಚೀನಾ ತೈಪೆಯ ಚೌ ತಿಯೆನ್ ಚೆನ್ ಅವರನ್ನು ಎದುರಿಸಲಿದ್ದಾರೆ. ಜಾರ್ಜ್ ಅವರಿಗೆ ಡೆನ್ಮಾರ್ಕ್‌ನ ರಾಸ್ಮಸ್‌ ಗೆಮ್ಕೆ ಎದುರಾಳಿಯಾಗಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.