ಕುಸ್ತಿಪಟು ಬಜರಂಗ್ ಅಮಾನತು ನವದೆಹಲಿ: ಉದ್ದೀಪನ ಮದ್ದು ಸೇವನೆ ಪರೀಕ್ಷೆಗಾಗಿ ತಮ್ಮ ಮೂತ್ರದ ಮಾದರಿ ನೀಡಲು ನಿರಾಕರಿಸಿದ ಒಲಿಂಪಿಯನ್ ಬಜರಂಗ್ ಪೂನಿಯಾ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ. ನಾಡಾ (ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ) ತೆಗೆದುಕೊಂಡಿರುವ ಈ ಕ್ರಮಕ್ಕೆ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಅಸಮಾಧಾನ ವ್ಯಕ್ತಪಡಿಸಿದೆ. ಏಪ್ರಿಲ್ 23ರಂದು ಬಜರಂಗ್ ಅವರನ್ನು ಅಮಾನತು ಗೊಳಿಸಿದ್ದರೂ ನಾಡಾದಿಂದ ತಮಗೆ ಯಾವುದೇ ಮಾಹಿತಿ ಬಂದಿಲ್ಲವೆಂದು ಡಬ್ಲ್ಯುಎಫ್‌ಐ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು‘ಎಕ್ಸ್‌’ನಲ್ಲಿ ಪ್ರತಿಕ್ರಿಯಿ ಸಿರುವ ಬಜರಂಗ್, ‘ಮಾದರಿ ನೀಡಲು ನಾನು ನಿರಾಕರಿಸಿಲ್ಲ. ಆದರೆ ಮಾದರಿ ಸಂಗ್ರಹಿಸಲು ಸಿಬ್ಬಂದಿಯು ಅವಧಿ ಮೀರಿದ ಕಿಟ್ ತಂದಿದ್ದರು. ಆ ಕುರಿತು ಮೊದಲು ಸ್ಪಷ್ಟನೆ ನೀಡಿ ನಂತರ ಮಾದರಿ ತೆಗೆದು ಕೊಳ್ಳುವಂತೆ ಕೋರಿದ್ದೆ’ ಎಂದು ಬರೆದಿದ್ದಾರೆ. ಮಾದರಿ ಸಂಗ್ರಹಕ್ಕಾಗಿ ತಂದಿದ್ದ ಅವಧಿ ಮೀರಿದ ಕಿಟ್‌ಗಳ ವಿಡಿಯೊವನ್ನೂ ಬಜರಂಗ್ ಅವರು ಪೋಸ್ಟ್ ಮಾಡಿದ್ದಾರೆ. ‘ನಾಡಾದ ಕ್ರಮಕ್ಕೆ ನಮ್ಮ ವಕೀಲರಾದ ವಿದುಷ್ ಸಿಂಘಾನಿಯಾ ಉತ್ತರಿಸುತ್ತಾರೆ’ ಎಂದೂ ಬಜರಂಗ್ ಸ್ಪಷ್ಟಪಡಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.