ದೌರ್ಬಲ್ಯ ಪರಿಹರಿಸುವತ್ತ ಚಿತ್ತಹರಿಸಿದ್ದೇವೆ: ಲಕ್ಷ್ಯ ಮುಂಬೈ: ‘ನೆಟ್‌ ಬಳಿಯ ಆಟದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದೇನೆ. ಪಂದ್ಯದ ಅಂತಿಮ ಹಂತದಲ್ಲಿ ಪಾಯಿಂಟ್‌ಗಳನ್ನು ಬಿಟ್ಟುಕೊಡುವ ಇತ್ತೀಚಿನ ಸಮಸ್ಯೆಗೂ ದಾರಿ ಕಂಡುಕೊಂಡಿದ್ದೇನೆ‘ ಎಂದು ಭಾರತದ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ಹೇಳಿದ್ದಾರೆ. ಮುಂದಿನ ವಾರ ಪ್ಯಾರಿಸ್‌ನಲ್ಲಿ ಆರಂಭವಾಗುವ ಒಲಿಂಪಿಕ್ಸ್‌ಗೆ ಅದೇ ದೇಶದ ಬಂದರು ನಗರ ಮಾರ್ಸೆಯಲ್ಲಿ ಅವರು ಸಿದ್ಧತೆ ನಡೆಸುತ್ತಿದ್ದಾರೆ. ವಿಶ್ವ ಕ್ರಮಾಂಕದಲ್ಲಿ 19ನೆ ಸ್ಥಾನದಲ್ಲಿರುವ ಲಕ್ಷ್ಯ ಅವರು ‘ಎಲ್‌’ ಗುಂಪಿನಲ್ಲಿದ್ದಾರೆ. ಈ ಗುಂಪಿನಲ್ಲಿ ಅವರಿಗೆ ಕಠಿಣ ಪೈಪೋಟಿ ಎದುರಾಗುವ ನಿರೀಕ್ಷೆಯಿದೆ. ಮೂರನೇ ಕ್ರಮಾಂಕದ ಜೊನಾಥನ್‌ ಕ್ರಸ್ಟಿ (ಇಂಡೊನೇಷ್ಯಾ), 41ನೇ ಕ್ರಮಾಂಕದ ಕೆವಿನ್‌ ಕಾರ್ಡನ್‌ (ಗ್ವಾಟೆಮಾಲಾ), 52ನೇ ಕ್ರಮಾಂಕದ ಜೂಲಿಯನ್ ಕರಾಗಿ (ಬೆಲ್ಜಿಯಂ) ಅವರೂ ಇದೇ ಗುಂಪಿನಲ್ಲಿದ್ದಾರೆ. ಇವರಲ್ಲಿ ಕೆವಿನ್ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು. ‘ಆಟದ ಒಟ್ಟಾರೆ ಸುಧಾರಣೆಯ ಕಡೆ ನಾವು ಗಮನವನ್ನು ಕೇಂದ್ರೀಕರಿಸಿದ್ದೇವೆ. ಕಳೆದ 6–7 ವಾರಗಳಿಂದ ಆಟೆದ ಎಲ್ಲ ವಿಭಾಗಗಳಲ್ಲಿ ಹೆಚ್ಚು ಶ್ರಮ ಹಾಕಿದ್ದೇನೆ. ಆಟದಲ್ಲಿರುವ ದೌರ್ಬಲ್ಯಗಳನ್ನು ತಿದ್ದುವ ಕಡೆ ಗಮಹರಿಸುತ್ತಿದ್ದೇವೆ’ ಎಂದು ಅವರು ಆನ್‌ಲೈನ್‌ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ಆಟದಲ್ಲಿ ಚುರುಕಿನ ಜೊತೆಗೆ ಆಕ್ರಮಣಕಾರಿಯಾಗುವುದು ಮುಖ್ಯ’ ಎಂದರು. ಸಮುದ್ರದ ಬದಿ ಷಟ್ಲ್‌ ಚಲಿಸುವ ವೇಗಕ್ಕೆ ಹೊಂದಿಕೊಳ್ಳುವುದು ಭಿನ್ನ ಅನುಭವ. ಇಲ್ಲಿನ (ಮಾರ್ಸೆ) ಪರಿಸ್ಥಿತಿ ಪ್ಯಾರಿಸ್‌ನಲ್ಲೂ ಇರಬಹುದೆಂಬ ನಿರೀಕ್ಷೆಯಲ್ಲಿದ್ದಾರೆ 22 ವರ್ಷದ ಲಕ್ಷ್ಯ. ಅವರು ಜುಲೈ 22 ರಂದು ಪ್ಯಾರಿಸ್‌ಗೆ ಹೋಗಲಿದ್ದಾರೆ. ನಮ್ಮ ತಂಡದಲ್ಲಿ ಹತ್ತು ಮಂದಿ ಇದ್ದಾರೆ. ಇದು (ಮಾರ್ಸೆ) ಪ್ಯಾರಿಸ್‌ಗೆ ಹತ್ತಿರವಿರುವ ಕಾರಣ ನಾವು ಇದನ್ನೇ ಆಯ್ಕೆ ಮಾಡಿಕೊಂಡೆವು. ಇಲ್ಲಿನ ಪೊಪೊವ್ ಸೋದರರು (ಕ್ರಿಸ್ಟೊ ಮತ್ತು ಬೋರಿಸ್‌) ನಮಗೆ ಆಟದಲ್ಲಿ ಉತ್ತಮ ಜೊತೆಗಾರರು ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.