| ಶೀಘ್ರದಲ್ಲೇ ಶಸ್ತ್ರಚಿಕಿತ್ಸೆ ಒಳಗಾಗಲಿರುವ ನೀರಜ್‌ ಪ್ಯಾರಿಸ್‌: ‘ತಾನು ತೊಡೆಯ ಸ್ನಾಯುಗಳಿಗೆ ಸಂಬಂಧಿಸಿದ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದು, ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಬಹುದು’ ಎಂದು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಜಾವೆಲಿನ್‌ ಥ್ರೋ ತಾರೆ ಹೇಳಿದ್ದಾರೆ. ‘ನನ್ನ ಮನಸ್ಸಿನಲ್ಲಿ ಬಹಳಷ್ಟು ಇದೆ. ನಾನು ಜಾವೆಲಿನ್‌ ಎಸೆಯುವಾಗ ಶೇ 60-70ರಷ್ಟು ನನ್ನ ಗಮನವು ಗಾಯದ ನೋವಿನ ಮೇಲೆ ಇರುತ್ತಿತ್ತು. ನಾನು ಗಾಯಗೊಳ್ಳಲು ಬಯಸುವುದಿಲ್ಲ. ನಾನು ಜಾವೆಲಿನ್‌ ಎಸೆಯಲು ಹೋದಾಗಲೆಲ್ಲಾ ನನ್ನ ವೇಗವು ಕಡಿಮೆಯಾಗಿರುವುದನ್ನು ನೀವು ನೋಡಿದ್ದೀರಿ. ನಾನು ನನ್ನನ್ನು ತಳ್ಳುತ್ತಿದ್ದೆ’ ಎಂದು ಅವರು ತಿಳಿಸಿದ್ದಾರೆ. ‘ಶಸ್ತ್ರಚಿಕಿತ್ಸೆಗೆ ಒಳಗಾಗಲು ವೈದ್ಯರು ನನಗೆ ಸಲಹೆ ನೀಡಿದ್ದರು. ಆದರೆ, ವಿಶ್ವ ಚಾಂಪಿಯನ್‌ಷಿಪ್‌ಗೆ ಮೊದಲು ಅಥವಾ ನಂತರ ಆ ನಿರ್ಧಾರವನ್ನು ತೆಗೆದುಕೊಳ್ಳಲು ನನಗೆ ಹೆಚ್ಚು ಸಮಯವಿರಲಿಲ್ಲ. ಈ ಒಲಿಂಪಿಕ್ಸ್‌ಗೆ ತಯಾರಿ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳಬೇಕಾಯಿತು’ ಎಂದು ಚೋಪ್ರಾ ಹೇಳಿದ್ದಾರೆ. ಚಿನ್ನ ಕಳೆದುಕೊಂಡ ಮತ್ತು ನೋವಿನ ಹತಾಶೆಯಲ್ಲಿದ್ದ ನೀರಜ್, ‘ನಾನು ಶಸ್ತ್ರಚಿಕಿತ್ಸೆಯನ್ನು ಇನ್ನೂ ತಳ್ಳುತ್ತಲೇ ಇದ್ದೇನೆ. ಅದು ಒಳ್ಳೆಯ ಬೆಳವಣಿಗೆಯಲ್ಲ. ಕ್ರೀಡೆಯಲ್ಲಿ ಸುದೀರ್ಘವಾಗಿ ಮುಂದುವರಿಯಲು ಫಿಟ್ ಮತ್ತು ಆರೋಗ್ಯಕರವಾಗಿರಬೇಕು. ಆದರೆ, ನಾವು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದಷ್ಟು ಸ್ಪರ್ಧೆಗಳಿತ್ತು. ಈಗ ಸಮಯ ಬಂದಿದ್ದು, ನಮ್ಮ ತಂಡದೊಂದಿಗೆ ಮಾತನಾಡಿ ನಂತರ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು. 26 ವರ್ಷದ ನೀರಜ್‌ ಅವರು ಸತತ ಎರಡು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೂರನೇ ಕ್ರೀಡಾಪಟುವಾಗಿದ್ದಾರೆ. ಈ ಹಿಂದೆ ಬ್ಯಾಡ್ಮಿಂಟನ್‌ ತಾರೆ ಪಿ.ವಿ. ಸಿಂಧು ಮತ್ತು ಕುಸ್ತಿಪಟು ಸುಶೀಲ್‌ ಕುಮಾರ್ ಎರಡು ಪದಕ ಗೆದ್ದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.