ಬಿಎಫ್‌ಐ ಆಡಳಿತದಲ್ಲಿ ಗೊಂದಲ: ಎಫ್‌ಐಬಿಎ ಮಧ್ಯಪ್ರವೇಶಕ್ಕೆ ಮನವಿ ಬೆಂಗಳೂರು: ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ನ (ಬಿಎಫ್‌ಐ) ಆಡಳಿತದಲ್ಲಿ ತಲೆದೋರಿರುವ ಗೊಂದಲ ಬಗೆಹರಿಸಲು ಮಧ್ಯಪ್ರವೇಶಿಸಬೇಕೆಂದು ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್‌ ಸಂಸ್ಥೆಯ ಕಾರ್ಯದರ್ಶಿ ಕೆ.ಗೋವಿಂದರಾಜ್‌ ಅವರು ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ಗೆ (ಎಫ್‌ಐಬಿಎ) ಮನವಿ ಮಾಡಿದ್ದಾರೆ. ಬಿಎಫ್‌ಐ ಆಡಳಿತ ನೋಡಿಕೊಳ್ಳಲು ಎರಡು ಬಣಗಳ ನಡುವೆ ತಿಕ್ಕಾಟ ನಡೆಯುತ್ತಿರುವುದರಿಂದ, ಭಾರತದ ತಂಡಗಳು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಅವಕಾಶದಿಂದ ವಂಚಿತವಾಗುತ್ತಿವೆ. ಥಾಯ್ಲೆಂಡ್‌ನಲ್ಲಿ ನಡೆಯುತ್ತಿರುವ ಎಫ್‌ಐಬಿಎ ಏಷ್ಯಾ ಕಪ್‌ ಮಹಿಳೆಯರ ‘ಬಿ’ ಡಿವಿಷನ್‌ ಟೂರ್ನಿಯಲ್ಲಿ ಭಾರತ ತಂಡ ಪಾಲ್ಗೊಳ್ಳಬೇಕಿತ್ತು. ಅದರೆ ಕೊನೆಯ ಕ್ಷಣದಲ್ಲಿ ಭಾರತದ ಬದಲು ಶ್ರೀಲಂಕಾ ತಂಡಕ್ಕೆ ಅವಕಾಶ ನೀಡಲಾಗಿತ್ತು. ಅದೇ ರೀತಿ ಭಾರತದ 16 ವರ್ಷದೊಳಗಿನ ಬಾಲಕಿಯರ ತಂಡ, ಜೋರ್ಡಾನ್‌ನಲ್ಲಿ ಕಳೆದ ತಿಂಗಳು ನಡೆದಿದ್ದ ಎಫ್‌ಐಬಿಎ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿರಲಿಲ್ಲ. ‘ಬ್ಯಾಸ್ಕೆಟ್‌ಬಾಲ್‌ ಆಟಗಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಈಗ ತಲೆದೋರಿರುವ ಗೊಂದಲ ಬಗೆಹರಿಸಬೇಕು’ ಎಂದು ಗೋವಿಂದರಾಜ್‌ ಅವರು ಎಫ್‌ಐಬಿಎಗೆ ಬರೆದ ಪತ್ರದಲ್ಲಿ ಕೋರಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.