| ನಿರಾಸೆ ಮೂಡಿಸಿದ ಭಾರತದ ಬಿಲ್ಗಾರರು ಪ್ಯಾರಿಸ್‌: ಭಾರತದ ಪುರುಷರ ಆರ್ಚರಿ ರಿಕರ್ವ್‌ ತಂಡವೂ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಹಂತವನ್ನು ದಾಟಲು ವಿಫಲವಾಯಿತು. ಸೋಮವಾರ ತರುಣದೀಪ್ ರಾಯ್‌, ಧೀರಜ್ ಬೊಮ್ಮದೇವರ ಮತ್ತು ಪ್ರವೀಣ್ ಜಾಧವ್ ಅವರನ್ನು ಒಳಗೊಂಡ ಪುರುಷರ ತಂಡ 2–6 ಅಂತರದಲ್ಲಿ ಟರ್ಕಿಯ ವಿರುದ್ಧ ಸೋತು ಹೊರಬಿತ್ತು. ಭಾರತದ ಮಹಿಳೆಯರ ತಂಡವು ಭಾನುವಾರ ಕ್ವಾರ್ಟರ್‌ ಫೈನಲ್‌ನಲ್ಲಿ ನೆದರ್ಲೆಂಡ್ಸ್‌ ತಂಡದೆದುರು ನಿರಾಸೆ ಅನುಭವಿಸಿತ್ತು. ನಾಲ್ಕನೇ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಅನುಭವಿ ತರುಣದೀಪ್‌ ಮತ್ತು ಯುವ ತಾರೆಗಳಾದ ಧೀರಜ್‌ ಮತ್ತು ಪ್ರವೀಣ್‌ ಅವರು ಪದಕದ ಭರವಸೆಯನ್ನು ಮೂಡಿಸಿದ್ದರು. ರ‍್ಯಾಂಕಿಂಗ್‌ ಸುತ್ತಿನಲ್ಲಿ ಮೂರನೇ ಸ್ಥಾನದೊಂದಿಗೆ ಕ್ವಾರ್ಟರ್‌ ಫೈನಲ್‌ ನೇರ ಅರ್ಹತೆ ಪಡೆದಿತ್ತು. ಆದರೆ, ಟರ್ಕಿ ವಿರುದ್ಧ ಬಾಣ ಪ್ರಯೋಗದಲ್ಲಿ ನಿರೀಕ್ಷೆಯ ಮಟ್ಟ ತಲುಪಲಿಲ್ಲ. ಭಾರತ 53-57, 52-55, 55-54, 54-58ರಿಂದ ಪರಾಭವಗೊಂಡಿತು. ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ಮೊದಲ ಎರಡು ಸೆಟ್‌ಗಳನ್ನು ಸೋತ ನಂತರ ಮೂರನೇ ಸೆಟ್‌ನಲ್ಲಿ ಮೇಲುಗೈ ಸಾಧಿಸಿತು. ಆದರೆ, ಕೊನೆಯ ಸೆಟ್‌ನಲ್ಲಿ ಟರ್ಕಿಯ ಯುವ ಬಿಲ್ದಾರರು ನಿಖರ ಗುರಿಯೊಂದಿಗೆ ಪ್ರಾಬಲ್ಯ ಮೆರೆದರು. ದೌರ್ಭಾಗ್ಯ: ಈ ಸೋಲು ಭಾರತದ ಆರ್ಚರಿಗೆ ದೌರ್ಭಾಗ್ಯದಾಯಕ ಎಂದು ಒಲಿಂಪಿಯನ್ ಹಾಗೂ ಕಾಮನ್ವೆಲ್ತ್ ಚಿನ್ನದ ಪದಕ ವಿಜೇತ ರಾಹುಲ್ ಬ್ಯಾನರ್ಜಿ ಹೇಳಿದ್ದಾರೆ. ‘ಇದು ಅನಿರೀಕ್ಷಿತವಾಗಿತ್ತು. ದಕ್ಷಿಣ ಕೊರಿಯಾಕ್ಕೆ ಮತ್ತೊಂದು ಸ್ವರ್ಣ ದಕ್ಷಿಣ ಕೊರಿಯಾ ತಂಡ ಆರ್ಚರಿ ಪುರುಷರ ತಂಡ ವಿಭಾಗದ ಫೈನಲ್‌ನಲ್ಲಿ 5–1 ರಿಂದ ಆತಿಥೇಯ ಫ್ರಾನ್ಸ್ ತಂಡವನ್ನು ಸೋಲಿಸಿ ಸ್ವರ್ಣ ಗೆದ್ದುಕೊಂಡಿತು. ಇದು ಕೊರಿಯಾ ತಂಡ ಹಾಲಿ ಒಲಿಂಪಿಕ್ಸ್‌ನಲ್ಲಿ ಗೆದ್ದ ಐದನೇ ಚಿನ್ನ. ಫ್ರಾನ್ಸ್‌ ಬೆಳ್ಳಿ ಹಾಗೂ ಟರ್ಕಿ ಕಂಚಿನ ಪದಕ ಗೆದ್ದುಕೊಂಡವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.