ಬ್ರಿಜ್‌ಭೂಷಣ್‌ ವಿರುದ್ಧ ದೋಷಾರೋಪ: ಪೊಲೀಸರ ಒತ್ತಾಯ ನವದೆಹಲಿ: ಭಾರತ ಕುಸ್ತಿ ಫೆಡರೇಷನ್‌ನ (ಡಬ್ಲ್ಯುಎಫ್‌ಐ) ಮಾಜಿ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ದಾಖಲಾಗಿರುವ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣದಲ್ಲಿ ದೋಷಾರೋಪ ನಿಗದಿಪಡಿಸುವಂತೆ ದೆಹಲಿ ಪೊಲೀಸರು ನ್ಯಾಯಾಲಯವನ್ನು ಶನಿವಾರ ಒತ್ತಾಯಿಸಿದ್ದಾರೆ. ಆರೋಪಿಸಲಾಗಿರುವ ಕೆಲ ಘಟನೆಗಳು ಹೊರದೇಶದಲ್ಲಿ ನಡೆದಿರುವ ಕಾರಣ ಅವು ದೆಹಲಿ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ, ದೋಷಾರೋಪ ನಿಗದಿಯ ವಾದ–ಪ್ರತಿವಾದಗಳು ಮುಕ್ತಾಯಗೊಂಡಿವೆ ಎಂಬ ಆರೋಪಿಯ ವಾದವನ್ನು ಪೊಲೀಸರು ವಿರೋಧಿಸಿದರು. ಸಿಂಗ್‌ ಅವರು ಹೊರದೇಶದಲ್ಲಿ ಮತ್ತು ಭಾರತದಲ್ಲಿ ನಡೆಸಿದ್ದಾರೆ ಎನ್ನಲಾದ ಲೈಂಗಿಕ ಕಿರುಕುಳ ಘಟನೆಗಳು ಒಂದೇ ಅಪರಾಧದ ಭಾಗ ಎಂದು ಪೊಲೀಸರು, ಅಡಿಷನಲ್‌ ಚೀಫ್‌ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಪ್ರಿಯಾಂಕ್‌ ರಜಪೂತ್‌ ಅವರ ಮುಂದೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ‘ಈ ಪ್ರಕರಣದ ವಿಚಾರಣೆಯು ದೆಹಲಿ ಕೋರ್ಟ್‌ ವ್ಯಾಪ್ತಿಗೇ ಬರುತ್ತದೆ’ ಎಂದು ಹೇಳಿದ್ದಾರೆ. ಪ್ರಕರಣದ ವಿಚಾರಣೆಯನ್ನು ಕೋರ್ಟ್‌ ಇದೇ ತಿಂಗಳ 20ಕ್ಕೆ ಮುಂದುವರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.