ಹೆಬ್ರಿ: ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಸೃಜನ್‌ಗೆ ಹುಟ್ಟೂರಲ್ಲಿ ಸ್ವಾಗತ ಹೆಬ್ರಿ: ತೆಲಂಗಾಣ ಕಾಮರೆಡ್ಡಿಯಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಕಬಡ್ಡಿ ಟೂರ್ನಿಯಲ್ಲಿ ಕರ್ನಾಟಕ ಬಾಲಕರ ತಂಡ ಫೈನಲ್‌ನ ರೋಚಕ ಪಂದ್ಯದಲ್ಲಿ ಹರಿಯಾಣ ತಂಡದ ವಿರುದ್ಧ 52.59 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದೆ. ತಂಡವನ್ನು ಪ್ರತಿನಿಧಿಸಿದ್ದ ಮುನಿಯಾಲು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಸೃಜನ್ ಉತ್ತಮ ಆಟ ಪ್ರದರ್ಶಿಸಿ ಕೀರ್ತಿ ತಂದಿದ್ದಾರೆ. ಅವರು ಮೂಡುಕುಡೂರು ರತ್ನಾಕರ ಶೆಟ್ಟಿ ಮತ್ತು ಸುಜಾತ ಶೆಟ್ಟಿ ದಂಪತಿ ಪುತ್ರ. ದೈಹಿಕ ಶಿಕ್ಷಣ ಶಿಕ್ಷಕರಾದ ತಾರಾನಾಥ ಶೆಟ್ಟಿ, ಭಾರತಿ ಮಂಜುನಾಥ ನಾಯಕ್ ಸೃಜನ್ ಅವರನ್ನು ತರಬೇತಿಗೊಳಿಸಿದ್ದಾರೆ. ಹುಟ್ಟೂರಿನಲ್ಲಿ ಭವ್ಯ ಸ್ವಾಗತ: ಹುಟ್ಟೂರಿಗೆ ಆಗಮಿಸಿದ ಸೃಜನ್‌ ಅವರನ್ನು ಇಲ್ಲಿನ ಅನಂತ ಪದ್ಮನಾಭ ದೇವಸ್ಥಾನದ ಬಳಿ ಸ್ವಾಗತಿಸಿ ಗೌರವಿಸಲಾಯಿತು. ಹೆಬ್ರಿಯಿಂದ ಮುನಿಯಾಲಿನ ತನಕ ತೆರೆದ ವಾಹನದಲ್ಲಿ ಸೃಜನ್ ಅವರನ್ನು ಕರೆತರಲಾಯಿತು. ಗ್ರಾಮ ಪಂಚಾಯಿತಿ ವತಿಯಿಂದ ಅಧ್ಯಕ್ಷ ತಾರಾನಾಥ ಎಸ್‌.ಬಂಗೇರ, ಚೈತನ್ಯ ಯುವ ವೃಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಪ್ರವೀಣ್‌ ಕುಮಾರ್‌ ಸಹಿತ ಹಲವರು ಗೌರವಿಸಿದರು. ಶಿಕ್ಷಕರು, ಕ್ರೀಡಾ ಪ್ರೇಮಿಗಳು, ವಿದ್ಯಾರ್ಥಿಗಳು, ಪ್ರಮುಖರು, ಜನಪ್ರತಿನಿಧಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.