ಐಒಎಗೆ ಸಿಇಒ ನೇಮಕ– ಹಿಂದೆ ಸರಿಯುವುದಿಲ್ಲ: ಪಿ.ಟಿ. ಉಷಾ ನವದೆಹಲಿ : ಹೊಸದಾಗಿ ನೇಮಕಗೊಂಡ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ರಘುರಾಮ್‌ ಅಯ್ಯರ್‌ ಮೇಲೆ ಸಂಪೂರ್ಣ ವಿಶ್ವಾಸವಿದೆ ಮತ್ತು ಉನ್ನತ ಹುದ್ದೆಗೆ ಅವರನ್ನು ನೇಮಿಸಿರುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಅಧ್ಯಕ್ಷೆ ಪಿ.ಟಿ.ಉಷಾ ಭಾನುವಾರ ಹೇಳಿದರು. ರಘುರಾಮ್ ಅವರ ನೇಮಕವನ್ನು ಅನೂರ್ಜಿತ ಎಂದು ಘೋಷಿಸುವ ಅಮಾನತು ಆದೇಶಕ್ಕೆ ಐಒಎ ಕಾರ್ಯಕಾರಿ ಸಮಿತಿಯ ಹೆಚ್ಚಿನ ಸದಸ್ಯರು ಸಹಿ ಹಾಕಿದ್ದಾರೆ ಎಂದು ವರದಿಗಳು ಹೇಳಿದ್ದವು. ಐಒಎ ಜನವರಿ 6 ರಂದು ರಾಜಸ್ಥಾನ ರಾಯಲ್ಸ್‌ನ ಮಾಜಿ ಅಧಿಕಾರಿ ಅಯ್ಯರ್ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಿತ್ತು. ಆದರೆ, ಕಾರ್ಯಕಾರಿ ಸಮಿತಿಯ ಹಲವಾರು ಸದಸ್ಯರು, ಸಿಇಒ ಆಗಿ ಅಯ್ಯರ್ ಅವರನ್ನೇ ಶಿಫಾರಸು ಮಾಡಲು ಉಷಾ ತಮ್ಮ ಮೇಲೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದರು. ಈ ಆರೋಪವನ್ನು ಉಷಾ ‘ನಾಚಿಕೆ ಗೇಡಿನದು’ ಎಂದು ಟೀಕಿಸಿದ್ದರು. ದೆಹಲಿ ಸ್ಪೋರ್ಟ್ಸ್ ಜರ್ನಲಿಸ್ಟ್ಸ್ ಅಸೋಸಿಯೇಷನ್ (ಡಿಎಸ್‌ಜೆಎ) ಮತ್ತು ಸ್ಪೋರ್ಟ್ಸ್ ಜರ್ನಲಿಸ್ಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಜೆಎಫ್ಐ) ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಉಷಾ, ‘ಸಿಇಒ ಅವರನ್ನು ಸರಿಯಾದ ರೀತಿಯಲ್ಲಿ ನೇಮಕ ಮಾಡಿದ್ದೇನೆ ಮತ್ತು ಅವರು ಕೆಲಸ ಮಾಡುತ್ತಿದ್ದಾರೆ. ತಪ್ಪು ಕೆಲಸ ಮಾಡಿದಾಗ, ಭಯಪಡಬೇಕು. ಸರಿ ಯಾಗಿ ಕೆಲಸ ಮಾಡುತ್ತಿರುವಾಗ ಅದರ ಬಗ್ಗೆ ಏಕೆ ಚಿಂತಿಸಬೇಕು’ ಎಂದರು. ಇದೇ ವೇಳೆ ಎಸ್‌ಜೆಎಫ್‌ಐ ಮತ್ತು ಡಿಎಸ್‌ಜೆಐ ವತಿಯಿಂದ ಪಿ.ಟಿ. ಉಷಾ ಅವರಿಗೆ 'ಜೀವಮಾನ ಸಾಧನೆ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.