ಪ್ರಶಸ್ತಿಗೆ ಸುರೇಶ್– ಜತಿನ್‌ ಸೆಣಸು ಮೈಸೂರು: ತಮಿಳುನಾಡಿನ ಸುರೇಶ್‌ ದಕ್ಷಿಣೇಶ್ವರ್‌ ಮತ್ತು ನವದೆಹಲಿಯ ಜತಿನ್‌ ದಹಿಯಾ ಅವರು ಮೈಸೂರು ಓಪನ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ ವಿಭಾಗದ ಪ್ರಶಸ್ತಿಗೆ ಶುಕ್ರವಾರ ಪರಸ್ಪರ ಪೈಪೋಟಿ ನಡೆಸಲಿದ್ದಾರೆ. ಆರೆಂಜ್‌ ಸ್ಪೋರ್ಟ್ಸ್‌ ಮತ್ತು ಮೈಸೂರು ಟೆನಿಸ್‌ ಕ್ಲಬ್‌ ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಗುರುವಾರ ನಡೆದ ಸೆಮಿಫೈನಲ್‌ ಪಂದ್ಯಗಳಲ್ಲಿ ಇವರು ಎದುರಾಳಿಗಳ ವಿರುದ್ಧ ನೇರ ಸೆಟ್‌ಗಳ ಜಯ ಸಾಧಿಸಿದರು. ಸುರೇಶ್‌ ಅವರು 6–4, 6–4 ರಲ್ಲಿ ರಿಷಿ ರೆಡ್ಡಿ ಅವರನ್ನು ಮಣಿಸಿದರೆ, ಜತಿನ್‌ 7–5, 6–2 ರಲ್ಲಿ ಬಿ.ಆರ್‌.ನಿಕ್ಷೇಪ್ ವಿರುದ್ಧ ಗೆದ್ದರು. ಈ ಟೂರ್ನಿಯಲ್ಲಿ ಕರ್ನಾಟಕದ ಭರವಸೆ ಎನಿಸಿದ್ದ ನಿಕ್ಷೇಪ್‌ ಮೊದಲ ಸೆಟ್‌ನಲ್ಲಿ ಎದುರಾಳಿಗೆ ತಕ್ಕ ಪೈಪೋಟಿ ನೀಡಿದರು. ಆದರೆ ಎರಡನೇ ಸೆಟ್‌ನಲ್ಲಿ ಹೆಚ್ಚಿನ ಪ್ರತಿರೋಧ ಒಡ್ಡದೆ ಶರಣಾದರು. ಡಬಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯಗಳಲ್ಲಿ ಸುರೇಶ್ ದಕ್ಷಿಣೇಶ್ವರ್– ಯಶ್‌ ಯಾದವ್ ಜೋಡಿ 6–4, 6–4 ರಲ್ಲಿ ರೋಹನ್‌ ಭಾಟಿಯಾ– ನೇಸರ್‌ ಜೆವೂರ್‌ ವಿರುದ್ಧ; ರಂಜನ್‌ ಗುಹನ್– ಒಮಿಂದರ್ ಬೈಸೋಯಾ ಜೋಡಿ 6–3, 6–2 ರಲ್ಲಿ ನಿಕ್ಷೇಪ್– ಅಲೋಕ್‌ ಆರಾಧ್ಯ ಜೋಡಿ ವಿರುದ್ಧ ಜಯ ಪಡೆದು ಫೈನಲ್‌ ಪ್ರವೇಶಿಸಿದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.