ರಾಷ್ಟ್ರೀಯ ಚೆಸ್ ಚಾಂಪಿಯನ್‌ಷಿಪ್‌: ಅರಣ್ಯಾ, ಶ್ರೇಯಾಂಶಿಗೆ ಮುನ್ನಡೆ ಮೈಸೂರು: ತಮಿಳುನಾಡಿನ ಆರ್. ಅರಣ್ಯಾ ಹಾಗೂ ರಾಜಸ್ಥಾನದ ಶ್ರೇಯಾಂಶಿ ಜೈನ್‌ ಇಲ್ಲಿ ನಡೆಯುತ್ತಿರುವ ಏಳು ವರ್ಷದೊಳಗಿವರ 37ನೇ ರಾಷ್ಟ್ರೀಯ ಚೆಸ್ ಚಾಂಪಿಯನ್‌ಷಿಪ್‌ನ ಬಾಲಕಿಯರ ವಿಭಾಗದಲ್ಲಿ ಜಂಟಿ ಅಗ್ರಸ್ಥಾನದಲ್ಲಿ ಮುನ್ನಡೆದಿದ್ದಾರೆ. ಮಂಗಳವಾರ ಆರನೇ ಸುತ್ತಿನ ಪಂದ್ಯದಲ್ಲಿ ಅರಣ್ಯಾ ಆಂಧ್ರಪ್ರದೇಶದ ಶ್ರೀನಿಖಿಲಾ ವಿರುದ್ಧ ಹಾಗೂ ಶ್ರೇಯಾಂಶಿ ತಮ್ಮ ರಾಜ್ಯದವರೇ ಆದ ತೀಶಾಳನ್ನು ಮಣಿಸಿ ಒಟ್ಟು 6 ಅಂಕಗಳೊಂದಿಗೆ ಅಗ್ರ ಸ್ಥಾನ ಕಾಯ್ದುಕೊಂಡರು. ಪಶ್ಚಿಮ ಬಂಗಾಳದ ಅರ್ಪಿತಾಂಕ್ಷಿ ಭಟ್ಟಾಚಾರ್ಯ, ತೆಲಂಗಾಣದ ಸಯ್ಯದ್ ರುದಾ, ಆಂಧ್ರದ ಶ್ರೀನಿಖಿಲಾ, ರಾಜಸ್ಥಾನದ ತೀಶಾ, ಪೌರ್ಣಿಶಾ, ಪಶ್ಚಿಮ ಬಂಗಾಳದ ಅದೀನಾ ಮೊಹಂತಿ, ಒಡಿಶಾದ ಸ್ನೇಹಸ್ಮಿತಾ, ತಮಿಳುನಾಡಿನ ಎಸ್. ಆಶ್ರಿತಾ ತಲಾ ಐದು ಅಂಕಗಳೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಮುಕ್ತ ವಿಭಾಗದಲ್ಲಿ ಕೇರಳದ ಕೆ. ದೇವನಾರಾಯಣನ್‌ ಆರನೇ ಸುತ್ತಿನ ಅಂತ್ಯಕ್ಕೆ 6 ಅಂಕಗಳೊಂದಿಗೆ ಮುನ್ನಡೆ ಕಾಯ್ದುಕೊಂಡಿದ್ದಾನೆ. ಉತ್ತರ ಪ್ರದೇಶದ ಅಯಾಂಶ್ ಸಿಂಗ್‌, ತಮಿಳುನಾಡಿನ ತಕ್ಶಂತ್‌ ಆನಂದ್, ಅದ್ವಿಕ್‌ ಶರ್ಮ ತಲಾ ಐದೂವರೆ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಆರನೇ ಸುತ್ತಿನ ಪ್ರಮುಖ ಫಲಿತಾಂಶ: ಬಾಲಕಿಯರ ವಿಭಾಗ: ಎ. ಅರಣ್ಯಾಗೆ (ತಮಿಳುನಾಡು) ಆಂಧ್ರ‍ಪ್ರದೇಶದ ಶ್ರೀನಿಖಿಲಾ ವಿರುದ್ಧ; ಶ್ರೇಯಾಂಶಿ ಜೈನ್‌ಗೆ (ರಾಜಸ್ಥಾನ) ತೀಶಾ ಎದುರು; ಅರ್ಪಿತಾಂಕ್ಷಿ ಭಟ್ಟಾಚಾರ್ಯಗೆ (ಪ.ಬಂಗಾಳ) ಮಧು (ತೆಲಂಗಾಣ) ವಿರುದ್ಧ; ಎಸ್. ಆಶ್ರಿತಾಗೆ (ತಮಿಳುನಾಡು) ಈ. ಪೂಜಿತಾ (ಕರ್ನಾಟಕ) ವಿರುದ್ಧ ಗೆಲುವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.