ಸೂರಜ್‌ಗೆ ಆಘಾತ ನೀಡಿದ ಮಾನವ್‌ ಬೆಂಗಳೂರು:ಕರ್ನಾಟಕದ ಮಾನವ್ ಜೈನ್ ಎಐಟಿಎ ಪುರುಷರ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಎರಡನೇ ಶ್ರೇಯಾಂಕದ ಸೂರಜ್ ಪ್ರಬೋಧ್ ಅವರಿಗೆ ಆಘಾತ ನೀಡಿ, ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು. ಇಲ್ಲಿಯ ಪಡುಕೋಣೆ–ದ್ರಾವಿಡ್‌ ಸ್ಪೋರ್ಟ್ಸ್ ಎಕ್ಸ್‌ಲೆನ್ಸ್ ಕೇಂದ್ರದ ಪಿಬಿಐ–ಸಿಎಸ್‌ಇ ಟೆನಿಸ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ 17 ವರ್ಷದ ಮಾನವ್‌ ಬುಧವಾರ 6–4, 1–6, 6–2ರಿಂದ ರಾಜ್ಯದವರೇ ಆದ ಸೂರಜ್ ಅವರನ್ನು ಪರಾಭವಗೊಳಿಸಿದರು. ಪ್ರೀಕ್ವಾರ್ಟರ್‌ಫೈನಲ್‌ ಇತರ ಹಣಾಹಣಿಗಳಲ್ಲಿ ಕರ್ನಾಟಕದ ಮನೀಷ್ ಗಣೇಶ್ 6–4, 7–6ರಿಂದ ಮಧ್ಯಪ್ರದೇಶದ ಯಶ್ ಯಾದವ್ ಎದುರು, ನಿಕ್ಷೇಪ್ ಬಲ್ಲೆಕೆರೆ 7–6, 6–1ರಿಂದ ತಮಿಳುನಾಡಿನ ಇರ್ಫಾನ್ ಹುಸೇನ್ ವಿರುದ್ಧ ಜಯಭೇರಿ ಬಾರಿಸಿದರು. ಪುರುಷರ ಡಬಲ್ಸ್‌ ಕ್ವಾರ್ಟರ್‌ಫೈನಲ್‌ ಹಣಾಹಣಿಗಳಲ್ಲಿ ಮಧ್ಯಪ್ರದೇಶದ ನಿಶಾಂತ್ ರೆಬೆಲ್ಲೊ–ಯಶ್ ಯಾದವ್ ಜೋಡಿಯು 6–4, 61ರಿಂದ ತಮಿಳುನಾಡಿನ ಕೆವಿನ್ ಮಸಿಲಮಣಿ–ಭರತ್ ನಿಶೋಕ್ ಕುಮಾರನ್ ಎದುರು ಗೆದ್ದರು. ಕರ್ನಾಟಕದ ಪ್ರಾಣೇಶ್ ಬಾಬು–ಸಿದ್ಧಾರ್ಥ್ ಗಂಗಾತ್ಕರ್‌ ಜೋಡಿಯು– 2–6, 3–6ರಿಂದ ತಮಿಳುನಾಡಿನ ಜೆ. ಮೋಹಿತ್ ಮಯೂರ್–ತೇಜೊ ಓಜಸ್‌ ವಿರುದ್ಧ ಸೋತರು. ಕರ್ನಾಟಕದ ರಿಷಿ ರೆಡ್ಡಿ–ತಮಿಳುನಾಡಿನ ಧೀರಜ್ ಕೊಡಂಚಾ ಜೋಡಿಯು 6–3, 3–6, 10–7ರಿಂದ ಕರ್ನಾಟಕ ನಿಕ್ಷೇಪ್ ಬಲ್ಲೆಕೆರೆ–ಗುಜರಾತ್‌ನ ಮಧ್ವಿನ್ ಕಾಮತ್ ಅವರನ್ನು ಪರಾಭವಗೊಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.