ಫುಟ್‌ಬಾಲ್‌: ಆನಂದು ಹ್ಯಾಟ್ರಿಕ್‌ ಬೆಂಗಳೂರು: ಪಿ.ವಿ.ಆನಂದು ಕೃಷ್ಣಾ ಗಳಿಸಿದ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಪುದುಚೇರಿ ತಂಡ ಕರ್ನಾಟಕ ರಾಜ್ಯ ಫುಟ್‌ಬಾಲ್‌ ಸಂಸ್ಥೆ (ಕೆಎಸ್‌ಎಫ್‌ಎ) ಆಶ್ರಯದ ರಾಷ್ಟ್ರೀಯ ಸಬ್‌ ಜೂನಿಯರ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ. ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ‘ಬಿ’ ಗುಂಪಿನ ಪೈಪೋಟಿಯಲ್ಲಿ ಪುದುಚೇರಿ 3–2 ಗೋಲುಗಳಿಂದ ತೆಲಂಗಾಣ ತಂಡವನ್ನು ಪರಾಭವಗೊಳಿಸಿತು. ಪುದುಚೇರಿ ತಂಡಕ್ಕೆ ಆರಂಭದಲ್ಲೇ ಹಿನ್ನಡೆ ಎದುರಾಯಿತು. ಐದನೇ ನಿಮಿಷದಲ್ಲಿ ಈ ತಂಡದ ಎಸ್‌.ಅನ್ಬರಸನ್‌ ಅವರು ಚೆಂಡನ್ನು ತಮ್ಮದೇ ಗೋಲುಪೆಟ್ಟಿಗೆಯೊಳಗೆ ಒದ್ದರು. ಹೀಗಾಗಿ ತೆಲಂಗಾಣ ತಂಡದ ಖಾತೆಗೆ ‘ಉಡುಗೊರೆ’ ಗೋಲು ಸೇರ್ಪಡೆಯಾಯಿತು. ನಂತರ ಆನಂದು, ಕಾಲ್ಚಳಕ ತೋರಿದರು. ಅವರು 17, 35 ಮತ್ತು 46ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿ 3–1 ಮುನ್ನಡೆಗೆ ಕಾರಣರಾದರು. 49ನೇ ನಿಮಿಷದಲ್ಲಿ ಗೋಲು ಹೊಡೆದ ತೆಲಂಗಾಣ ತಂಡದ ಸೈಯದ್‌ ಇಮ್ತಿಯಾಜ್‌ ಅಹಮದ್‌, ಹಿನ್ನಡೆ ತಗ್ಗಿಸಲಷ್ಟೇ ಶಕ್ತರಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.