ಫುಟ್‌ಬಾಲ್‌: ಸರ್ಬಿಯಾ ಎದುರು ಭಾರತಕ್ಕೆ ಸೋಲು ನವದೆಹಲಿ: ಹತ್ತೊಂಬತ್ತು ವರ್ಷದೊಳಗಿನವರ ಭಾರತ ಫುಟ್‌ಬಾಲ್‌ ತಂಡವು 0–2ರಿಂದ ಸರ್ಬಿಯಾ ವಿರುದ್ಧದ ಮೊದಲ ಸೌಹಾರ್ದ ಪಂದ್ಯದಲ್ಲಿ ಸೋತಿದೆ. ಸರ್ಬಿಯಾದ ಸ್ಟಾರಾ ಪಜಾವಾದಲ್ಲಿ ಗುರುವಾರ ತಡರಾತ್ರಿ ಪಂದ್ಯ ನಡೆಯಿತು. ಪಂದ್ಯದ ಆರಂಭದಿಂದಲೂ ಸರ್ಬಿಯಾ ಚುರುಕಾಗಿ ಆಡಿತು. 30ನೇ ನಿಮಿಷದಲ್ಲಿ ಬೊಸಿಕ್‌ ರಾಡಿಜೋವ್‌ ಅವರು ಗೋಲು ಗಳಿಸಿ ತಂಡಕ್ಕೆ 1–0 ಮುನ್ನಡೆ ತಂದುಕೊಟ್ಟರು. ಇದಾದ ನಂತರ ಭಾರತ ತಂಡದ ಅನಿಕೇತ್‌ ಜಾಧವ್‌ ಅವರು ಗೋಲು ಗಳಿಸಲು ಅನೇಕ ಬಾರಿ ಯತ್ನಿಸಿದರು. ಆದರೆ, ಎದುರಾಳಿ ತಂಡದ ರಕ್ಷಣಾ ಕೋಟೆ ಬೇಧಿಸಲು ಸಾಧ್ಯವಾಗಲಿಲ್ಲ. ಮೊದಲಾರ್ಧದಲ್ಲಿ ಭಾರತದ ಆಕಾಶ್‌ ಅವರು ಗಾಯಗೊಂಡು ನಿವೃತ್ತಿಯಾದರು. ಅವರ ಬದಲಿಗೆ ಆಶಿಶ್ ರೈ ಅವರು ಅಂಗಳಕ್ಕಿಳಿದರು. 35ನೇ ನಿಮಿಷದಲ್ಲಿ ಅಮರ್ಜಿತ್‌ ಕಿಯಾಮ್‌ ಅವರು ಚೆಂಡನ್ನು ಗುರಿಯತ್ತ ಒದ್ದರು. ಸರ್ಬಿಯಾದ ಗೋಲ್‌ಕೀಪರ್‌ ಅದನ್ನು ಆಕರ್ಷಕ ರೀತಿಯಲ್ಲಿ ತಡೆದರು. ದ್ವಿತೀಯಾರ್ಧದಲ್ಲಿ ಭಾರತ ಆಕ್ರಮಣಕಾರಿ ಆಟವಾಡಿತು. ಆದರೆ, ಗೋಲು ಗಳಿಸಿ ಸಮಬಲ ಸಾಧಿಸುವ ಅದರ ಆಸೆ ಕೈಗೂಡಲಿಲ್ಲ. ಆಶಿಶ್‌ ಹಾಗೂ ಜಿಕ್ಸನ್‌ ಸಿಂಗ್‌ ಅವರು ಶಾರ್ಟ್‌ ಪಾಟ್‌ಗಳ ಮೂಲಕ ಗೋಲು ದಾಖಲಿಸಲು ಮುಂದಾದರು. ಆದರೆ, ಸರ್ಬಿಯಾದ ರಕ್ಷಣಾ ಪಡೆಯ ಆಟಗಾರರು ಎಚ್ಚರಿಕೆ ಆಟವಾಡಿ ಅದಕ್ಕೆ ಅವಕಾಶ ನೀಡಲಿಲ್ಲ. 82ನೇ ನಿಮಿಷದಲ್ಲಿ ಅಲೆಕ್ಸಾಂಡರ್‌ ಕೊಸ್ತಿಕ್‌ ಮತ್ತೊಂದು ಗೋಲು ಗಳಿಸಿ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು. ಮುಂದಿನ ಅವಧಿಯಲ್ಲಿ ಎಚ್ಚರಿಕೆ ಆಟಬಾಡಿದ ಸರ್ಬಿಯಾ ಪಂದ್ಯ ಜಯಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.