ಕರ್ನಾಟಕ–ಸರ್ವಿಸಸ್‌ ಹಣಾಹಣಿ ಲುಧಿಯಾನ: ಕರ್ನಾಟಕ, ಸಂತೋಷ್‌ ಟ್ರೋಫಿ ಫುಟ್‌ಬಾಲ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಶುಕ್ರವಾರ ಸರ್ವಿಸಸ್ ಎದುರು ಸೆಣಸಲಿದೆ. ಗುರುನಾನಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ಆಕ್ರಮಣ ವಿಭಾಗವನ್ನು ಹೊಂದಿರುವ ಕರ್ನಾಟಕ ಫೈನಲ್ ಕನಸಿನೊಂದಿಗೆ ಕಣಕ್ಕೆ ಇಳಿಯಲಿದೆ. ಮತ್ತೊಂದು ಪಂದ್ಯದಲ್ಲಿ ಎಂಟು ಬಾರಿಯ ಚಾಂಪಿಯನ್‌ ಪಂಜಾಬ್‌ ತಂಡ ಗೋವಾವನ್ನು ಎದುರಿಸಲಿದೆ. ವಲಯ ಮಟ್ಟದ ಪಂದ್ಯಗಳ ನಂತರ 10 ತಂಡಗಳು ಮುಖ್ಯ ಸುತ್ತು ಪ್ರವೇಶಿಸಿದ್ದವು. ಸರ್ವಿಸಸ್‌, ಗೋವಾ, ದೆಹಲಿ, ಮೇಘಾಲಯ ಮತ್ತು ಒಡಿಶಾ ತಂಡಗಳು ‘ಎ’ ಗುಂಪಿನಲ್ಲಿ ಸ್ಥಾನ ಗಳಿಸಿದ್ದರೆ ಕರ್ನಾಟಕ, ಮಹಾರಾಷ್ಟ್ರ, ಅಸ್ಸಾಂ, ಸಿಕ್ಕಿಂ ಮತ್ತು ಪಂಜಾಬ್ ತಂಡಗಳು ‘ಬಿ’ ಗುಂಪಿನಲ್ಲಿದ್ದವು. ಸರ್ವಿಸಸ್ ಮತ್ತು ಗೋವಾ ತಂಡಗಳು ತಲಾ 10 ಪಾಯಿಂಟ್ ಗಳಿಸಿದ್ದವು. ಪಂಜಾಬ್‌ ತನ್ನ ಕೊನೆಯ ಪಂದ್ಯದಲ್ಲಿ ಕರ್ನಾಟಕವನ್ನು 4–3ರಿಂದ ಮಣಿಸಿ ನಾಲ್ಕರ ಘಟ್ಟ ಪ್ರವೇಶಿಸಿತ್ತು. 10 ಪಾಯಿಂಟ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿತ್ತು. ಕರ್ನಾಟಕ ಮತ್ತು ಮಹಾರಾಷ್ಟ್ರ ತಲಾ ಏಳು ಪಾಯಿಂಟ್ ಗಳಿಸಿದ್ದವು. ಆದರೆ ಸಿಕ್ಕಿಂ ಎದುರು 5–0ಯಿಂದ ಗೆದ್ದಿರುವ ಕರ್ನಾಟಕ ಗೋಲು ಗಳಿಕೆ ಆಧಾರದಲ್ಲಿ ಸೆಮಿಗೆ ಪ್ರವೇಶಿಸಿತ್ತು. ಕರ್ನಾಟಕ ತಂಡ ಈ ವರೆಗೆ ಒಟ್ಟು 12 ಗೋಲುಗಳನ್ನು ಗಳಿಸಿದ್ದು ಟೂರ್ನಿಯಲ್ಲಿ ಹೆಚ್ಚು ಗೋಲು ದಾಖಲಿಸಿದ ತಂಡ ಎಂದೆನಿಸಿಕೊಂಡಿದೆ. ಆದರೆ ರಕ್ಷಣಾ ವಿಭಾಗ ನಿರೀಕ್ಷೆಗೆ ತಕ್ಕಂತೆ ಆಡದೇ ಇರುವ ಕಾರಣ ತಂಡ ಆತಂಕಕ್ಕೆ ಒಳಗಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.