‌ ಟೆನಿಸ್ ಟೂರ್ನಿ: ಕ್ವಾರ್ಟರ್‌ಫೈನಲ್‌ಗೆ ಗಂಧರ್ವ, ದಿಶಾ ಬೆಂಗಳೂರು: ನಾಲ್ಕನೇ ಶ್ರೇಯಾಂಕದ ಅಭಿಷೇಕ್‌ ಸುಬ್ರಮಣ್ಯಂಗೆ ಆಘಾತ ನೀಡಿದ ಗಂಧರ್ವ ಕೊತಪಲ್ಲಿ ಕೆಎಸ್‌ಎಲ್‌ಟಿಎ 14 ವರ್ಷದೊಳಗಿನವರ ಟ್ಯಾಲೆಂಟ್‌ ಸಿರೀಸ್‌ ಟೆನಿಸ್ ಟೂರ್ನಿಯ ಎಂಟರಘಟ್ಟ ತಲುಪಿದರು. ಮಂಗಳವಾರ ನಡೆದ ಬಾಲಕರ ಸಿಂಗಲ್ಸ್ ಪ್ರೀಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ 13 ವರ್ಷದ ಗಂಧರ್ವ 6–1, 6–0ಯಿಂದ ಅಭಿಷೇಕ್‌ಗೆ ಸೋಲುಣಿಸಿದರು. ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಅರ್ಹತಾ ಸುತ್ತಿನಿಂದ ಗೆದ್ದುಬಂದ ದಿಶಾ ಖಂಡೋಜಿ ತಮ್ಮ ಜಯದ ಓಟವನ್ನು ಮುಂದುರಿಸಿದರು. ಅವರು 6–4, 6–0ರಿಂದ ಎಂಟನೇ ಶ್ರೇಯಾಂಕದ ಉಮಾಮ್ ಅಹಮದ್ ವಿರುದ್ಧ ಗೆದ್ದು ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು. ಬಾಲಕರ ವಿಭಾಗದ ಇತರ ಪ್ರೀಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಶೌರ್ಯ ಭಟ್ಟಾಚಾರ್ಯ 7-5, 6-4ರಿಂದ ಅಹಿಲ್ ಆಯಾಜ್ ಎದುರು, ವೆಂಕಟೇಶ್ ಸುಬ್ರಮಣ್ಯ 6-0, 6-1ರಿಂದ ಸರಣ್ ಪ್ರಕಾಶ್ ವಿರುದ್ಧ, ಶ್ರೀಕರ್ ದೋಣಿ 6-3, 6-2ರಿಂದ ಕ್ರಿಸ್ಟೊ ಬಾಬು ಎದುರು ಗೆದ್ದು ಮುನ್ನಡೆದರು. ಬಾಲಕಿಯರ ವಿಭಾಗದಲ್ಲಿ ಜಾನಾ ಅಂಬರ್ ಸಾಲಾರ್‌ 6-1, 4-6, 7-5ರಿಂದ ಸಾನ್ವಿ ಮಿಶ್ರಾ ಎದುರು, ಜಿ.ಡಿ. ಮೇಘನಾ 6-1, 6-2ರಿಂದ ಜೀವಿಕಾ ಚೆನ್ನಭೈರೇಗೌಡ ವಿರುದ್ಧ ಗೆದ್ದು ಕ್ವಾರ್ಟರ್‌ಫೈನಲ್ ತಲುಪಿದರು. ಅರ್ಹತಾ ಸುತ್ತಿನಿಂದ ಬಂದ ಆಟಗಾರ್ತಿ ಶ್ರೀನಿಧಿ ಚೌಧರಿ ಅವರು ಸಂಗೀತಾ ರಾಮನ್ ವಿರುದ್ಧದ ಪಂದ್ಯದಲ್ಲಿ 3–0ಯಿಂದ ಮುನ್ನಡೆಯಲ್ಲಿದ್ದರು. ಈ ವೇಳೆ ಗಾಯದ ಹಿನ್ನೆಲೆಯಲ್ಲಿ ಸಂಗೀತಾ ಪಂದ್ಯದಿಂದ ಹಿಂದೆ ಸರಿದರು. ಇದರೊಂದಿಗೆ ಶ್ರೀನಿಧಿ ಎಂಟರಘಟ್ಟ ಪ್ರವೇಶಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.