ಕೆಎಸ್‌ಎಲ್‌ಟಿಎ ಐಟಿಎಫ್‌ ಓಪನ್ ಟೆನಿಸ್‌ ಅರ್ಹತಾ ಸುತ್ತು: ಸೂರಜ್‌, ರಿಷಿ ಮುನ್ನಡೆ ಬೆಂಗಳೂರು: ಕರ್ನಾಟಕದ ಸೂರಜ್‌ ಪ್ರಬೋಧ್‌, ರಿಷಿ ರೆಡ್ಡಿ ಮಮತ್ತು ಆದಿಲ್ ಕಲ್ಯಾಣ್‌ಪುರಿ ಅವರು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಆತಿಥ್ಯದಲ್ಲಿ ನಡೆಯುತ್ತಿರುವ ಐಟಿಎಫ್‌ ಓಪನ್ ಟೆನಿಸ್‌ ಟೂರ್ನಿಯ ಅರ್ಹತಾ ಸುತ್ತುಗಳಲ್ಲಿ ಮುನ್ನಡೆದರು. ಕೆಎಸ್‌ಎಲ್‌ಟಿಎ ಅಂಗಣದಲ್ಲಿ ಭಾನುವಾರ ಆರಂಭವಾದ ಟೂರ್ನಿಯ ಮೊದಲ ಸುತ್ತಿನ ಅರ್ಹತಾ ಪಂದ್ಯಗಳಲ್ಲಿ ಸೂರಜ್‌6-4, 6-2ರಿಂದ ಶ್ರೀಲಂಕಾದ ಚಾತುರ್ಯ ನೀಲವೀರ ಅವರ ಸವಾಲು ಮೀರಿದರೆ, ಆದಿಲ್‌ ಅವರಿಗೆ 6-1, 6-2ರಿಂದ ಥಾಯ್ಲೆಂಡ್‌ನ ವೊರೊವಿನ್‌ ಕುಂಥೊನ್‌ಕಿಟ್ಟಿಕುಲ್ ವಿರುದ್ಧ ಜಯ ಒಲಿಯಿತು. ಮತ್ತೊಂದು ಹಣಾಹಣಿಯಲ್ಲಿ ರಿಷಿ6-3, 7-5ರಿಂದ ಈಜಿಪ್ಟ್‌ನ ಅಕ್ರಂ ಎಲ್‌ ಸಲಾರಿ ಅವರನ್ನು ಪರಾಭವಗೊಳಿಸಿದರು. ಮೊದಲ ಸುತ್ತನ ಮತ್ತೊಂದು ಸೆಣಸಾಟದಲ್ಲಿ ರಾಷ್ಟ್ರೀಯ ಚಾಂಪಿಯನ್‌ ಕರಣ್‌ ಸಿಂಗ್‌6-1, 6-0ರಿಂದ ಮತ್ತೊಬ್ಬ ಶ್ರೀಲಂಕಾ ಆಟಗಾರ ಥೆಹಾನ್‌ ಸಂಜಯ ವಿರುದ್ಧ ಗೆದ್ದರು. ಅರ್ಹತಾ ಸುತ್ತಿನಲ್ಲಿ ಅಗ್ರಶ್ರೇಯಾಂಕ ಪಡೆದಿರುವ ಭಾರತದ ದೇವ್ ಜಾವಿಯಾ ಅವರು7-5, 6-2ರಿಂದ ಭಾರತದವರೇ ಆದ ಅರ್ನಾವ್ ಪತಂಗೆ ಅವರನ್ನು ಸೋಲಿಸಿ ಮುನ್ನಡೆದರು. ಮೊದಲ ಸುತ್ತಿನ ಅರ್ಹತಾ ಪಂದ್ಯಗಳ ಇನ್ನುಳಿದ ಫಲಿತಾಂಶಗಳು: ತುಷಾರ್ ಮದನ್‌ಗೆ 7–6, 2–6ರಿಂದ ಲಕ್ಷಿತ್ ಸೂದ್‌ ಎದುರು ಜಯ, ಭರತ್‌ ನಿಶೋಕ್ ಕುಮಾರನ್‌ಗೆ3-6, 6-1, 13-11ರಿಂದ ಫರ್ದೀನ್ ಕಮರ್ ಎದುರು, ಜಪಾನ್‌ನ ದೈಸುಕೆ ಸುಮಿಜಾ ಅವರಿಗೆ6-1, 6-1ರಿಂದ ಭಾರತದ ಚಂದ್ರಿಲ್ ಸೂದ್‌ ವಿರುದ್ಧ, ರಂಜೀತ್ ವಿರಾಲಿ ಅವರಿಗೆ6-0, 6-2ರಿಂದ ಕವನ್ ಸೋಮುಕುಮಾರ್ ಎದುರು ಜಯ ಒಲಿಯಿತು. ಇಶಾಕ್ ಇಕ್ಬಾಲ್‌6-4, 6-3ರಿಂದ ಶಹಬಾಜ್ ಖಾನ್ ಎದುರು, ಪಾರಸ್‌ ದಹಿಯಾ6-2, 6-4ರಿಂದ ವಿನಾಯಕ್ ಶರ್ಮಾ ಕಜಾ ವಿರುದ್ಧ, ಲೋಹಿತಾಕ್ಷ ಬದ್ರಿನಾಥ್‌6-4, 6-2ರಿಂದ ರೋನಿನ್‌ ಲೋಟ್ಲಿಕರ್‌ ಎದುರು ಗೆದ್ದು ಮುಂದಿನ ಎರಡನೇ ಸುತ್ತಿಗೆ ಅರ್ಹತೆ ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.