ಡೇವಿಡ್‌ ಕಪ್‌ ಟೆನಿಸ್‌ ಟೂರ್ನಿ: ರಾಮಕುಮಾರ್‌ಗೆ ಸೋಲು ಲಿಲ್‌ಹ್ಯಾಮರ್‌, ನಾರ್ವೆ: ಭಾರತ ತಂಡ ಡೇವಿಡ್‌ ಕಪ್‌ ಟೆನಿಸ್‌ ಟೂರ್ನಿಯ ಗುಂಪು–1ರ ಮೊದಲ ಸುತ್ತಿನಲ್ಲಿ ನಾರ್ವೆ ಎದುರು ಸೋಲಿನ ಆತಂಕದಲ್ಲಿದೆ. ಶುಕ್ರವಾರ ನಡೆದ ಮೊದಲ ಎರಡೂ ಸಿಂಗಲ್ಸ್‌ ಪಂದ್ಯಗಳಲ್ಲಿ ಸೋತ ಭಾರತ, 0–2 ರಲ್ಲಿ ಹಿನ್ನಡೆ ಅನುಭವಿಸಿದೆ. ಎರಡನೇ ಸಿಂಗಲ್ಸ್‌ನಲ್ಲಿ ರಾಮಕುಮಾರ್‌ ರಾಮನಾಥನ್‌ ಅವರು 1–6, 4–6 ರಲ್ಲಿ ವಿಕ್ಟರ್‌ ದುರಸೊವಿಚ್‌ ಎದುರು ಪರಾಭವಗೊಂಡರು. ಮೊದಲ ಸಿಂಗಲ್ಸ್‌ನಲ್ಲಿ ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ 1–6, 4–6 ರಲ್ಲಿ ಕ್ಯಾಸ್ಪರ್‌ ರೂಡ್‌ ಎದುರು ಸೋತಿದ್ದರು. ಅಮೆರಿಕ ಓಪನ್‌ ಟೂರ್ನಿಯ ‘ರನ್ನರ್‌ ಅಪ್‌’ ಆಗಿರುವ ವಿಶ್ವದ ಎರಡನೇ ರ‍್ಯಾಂಕ್‌ನ ಆಟಗಾರ ರೂಡ್‌ ವಿರುದ್ಧ ಪ್ರಜ್ಞೇಶ್‌ ಸೋಲು ನಿರೀಕ್ಷಿತವೇ ಆಗಿತ್ತು. ಇದರಿಂದ ಎರಡನೇ ಸಿಂಗಲ್ಸ್‌ನಲ್ಲಿ ರಾಮಕುಮಾರ್‌ ಅವರು ಗೆಲ್ಲಲೇಬೇಕಾದ ಒತ್ತಡದಲ್ಲಿದ್ದರು. ಆದರೆ ವಿಶ್ವ ರ‍್ಯಾಂಕಿಂಗ್‌ನಲ್ಲಿ 276ನೇ ಸ್ಥಾನದಲ್ಲಿರುವ ಅವರು, ತಮಗಿಂತ ಕೆಳಗಿನ ರ‍್ಯಾಂಕ್‌ನಲ್ಲಿರುವ (325) ಆಟಗಾರನ ಎದುರು ನಿರಾಸೆ ಅನುಭವಿಸಿದರು. ಒಟ್ಟು 12 ಏಸ್‌ಗಳನ್ನು ಸಿಡಿಸಿದ ನಾರ್ವೆಯ ಆಟಗಾರ, ಮೂರು ಸಲ ಎದುರಾಳಿಯ ಸರ್ವ್‌ ಬ್ರೇಕ್ ಮಾಡಿದರು. 1 ಗಂಟೆ 16 ನಿಮಿಷಗಳಲ್ಲಿ ಪಂದ್ಯ ತಮ್ಮದಾಗಿಸಿಕೊಂಡರು. ಮೊದಲ ಸೆಟ್‌ನಲ್ಲಿ ರಾಮಕುಮಾರ್‌ ಮೊದಲ ಸರ್ವ್‌ನಲ್ಲಿ ಪಾಯಿಂಟ್‌ ಗಳಿಸಿ 1–1 ಸಮಬಲ ಸಾಧಿಸಿದರು. ಆ ಬಳಿಕ ಲಯ ಕಳೆದುಕೊಂಡರು. ಎರಡನೇ ಸೆಟ್‌ನಲ್ಲಿ ಮರುಹೋರಾಟದ ಸೂಚನೆ ನೀಡಿದರೂ, ದುರಸೊವಿಚ್‌ ಅದಕ್ಕೆ ಅವಕಾಶ ನೀಡಲಿಲ್ಲ. ಡಬಲ್ಸ್‌ ವಿಭಾಗದಲ್ಲಿ ಯೂಕಿ ಭಾಂಬ್ರಿ– ಸಾಕೇತ್‌ ಮೈನೇನಿ ಜೋಡಿ ರೂಡ್‌– ದುರಸೊವಿಚ್‌ ಅವರ ಸವಾಲನ್ನು ಎದುರಿಸಲಿದೆ. ಬಳಿಕ ನಡೆಯಲಿರುವ ರಿವರ್ಸ್‌ ಸಿಂಗಲ್ಸ್‌ನಲ್ಲಿ ರಾಮಕುಮಾರ್‌– ರೂಡ್‌ ಹಾಗೂ ಪ್ರಜ್ಞೇಶ್‌– ದುರಸೊವಿಚ್‌ ಪೈಪೋಟಿ ನಡೆಸುವರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.