ರಾಯ್‌ ಕೃಷ್ಣ, ಬೋಸ್‌ ಮೋಡಿ: ಎಟಿಕೆಎಂಬಿ ಜಯಭೇರಿ ಮಾಲೆ, ಮಾಲ್ಡಿವ್ಸ್: ಎರಡು ವರ್ಷಗಳ ಬಳಿಕ ಎಟಿಕೆ ಮೋಹನ್ ಬಾಗನ್ ತಂಡವನ್ನು ಸೋಲಿಸುವ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ಕನಸು ನನಸಾಗಲಿಲ್ಲ. ನಾಯಕ ರಾಯ್‌ ಕೃಷ್ಣ ಹಾಗೂ ಸುಭಾಶಿಶ್ ಬೋಸ್ ಗಳಿಸಿದ ಗೋಲುಗಳ ಬಲದಿಂದ ಎಟಿಕೆ ಮೋಹನ್ ಬಾಗನ್ (ಎಟಿಕೆಎಂಬಿ) ತಂಡವು ಎಎಫ್‌ಸಿ ಕಪ್ ಫುಟ್‌ಬಾಲ್‌ ಟೂರ್ನಿಯಲ್ಲಿ 2–0ಯಿಂದ ಸುನಿಲ್ ಚೆಟ್ರಿ ನಾಯಕತ್ವದ ಬಿಎಫ್‌ಸಿಯನ್ನು ಮಣಿಸಿತು. ಬುಧವಾರ ನಡೆದ ‘ಡಿ’ ಗುಂಪಿನ ಹಣಾಹಣಿಯಲ್ಲಿ ವಿಜೇತ ತಂಡದ ರಾಯ್‌ ಕೃಷ್ಣ 39ನೇ ನಿಮಿಷದಲ್ಲಿ ಗೋಲು ದಾಖಲಿಸಿದರೆ, ಸುಭಾಶಿಸ್ 46ನೇ ನಿಮಿಷದಲ್ಲಿ ಕಾಲ್ಚಳಕ ತೋರಿದರು. ಬಿಎಫ್‌ಸಿ ತಂಡವು 2019ರ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಟೂರ್ನಿಯಲ್ಲಿ ಎಟಿಕೆಎಂಬಿ ತಂಡವನ್ನು ಕೊನೆಯ ಬಾರಿ ಮಣಿಸಿತ್ತು. ಪಂದ್ಯದಲ್ಲಿ ಸ್ವತಃ ಚೆಟ್ರಿ ಅವರಿಗೂ ಉತ್ತಮ ಸಾಮರ್ಥ್ಯ ತೋರಲು ಸಾಧ್ಯವಾಗಲಿಲ್ಲ. 68ನೇ ನಿಮಿಷದಲ್ಲಿ ಅವರ ಸ್ಥಾನಕ್ಕೆ ಲಿಯೊನ್ ಅಗಸ್ಟಿನ್ ಬದಲಿ ಆಟಗಾರನಾಗಿ ಬಂದರು. ಮುಂದಿನ ಪಂದ್ಯದಲ್ಲಿ ಎಟಿಕೆಎಂಬಿ ತಂಡವು ಶನಿವಾರ ಮಾಲ್ಡಿವ್ಸ್‌ನ ಮಜಿಯಾ ಸ್ಪೋರ್ಟ್ಸ್ ಆ್ಯಂಡ್ ರಿಕ್ರಿಯೇಷನ್ ತಂಡವನ್ನು ಎದುರಿಸಲಿದೆ. ಅದೇ ದಿನ ಬೆಂಗಳೂರು ತಂಡಕ್ಕೆ ಬಾಂಗ್ಲಾದೇಶದ ಬಶುಂಧರಾ ಕಿಂಗ್ಸ್ ಸವಾಲು ಎದುರಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.