ನಾಲ್ಕರ ಘಟ್ಟಕ್ಕೆ ಬೆಂಗಳೂರು ಎಫ್‌ಸಿ ಕೋಲ್ಕತ್ತ: ದಿಟ್ಟ ಆಟವಾಡಿದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಆಟಗಾರರು ಡುರಾಂಡ್‌ ಕಪ್ ಟೂರ್ನಿಯ ಸೆಮಿಫೈನಲ್ ತಲುಪಿದ್ದಾರೆ. ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಬಿಎಫ್‌ಸಿ 3–2ರಿಂದ ಆರ್ಮಿ ಗ್ರೀನ್ ತಂಡವನ್ನು ಪರಾಭವಗೊಳಿಸಿತು. ವಿಜೇತ ತಂಡವು ಬುಧವಾರ ನಡೆಯುವ ನಾಲ್ಕರಘಟ್ಟದ ಪಂದ್ಯದಲ್ಲಿ ಎಫ್‌ಸಿ ಗೋವಾಕ್ಕೆ ಎದುರಾಗಲಿದೆ. ಬೆಂಗಳೂರು ಪರ ವುಂಗ್‌ಯಾಮ್‌ ಮುರಾಂಗ್‌ (20ನೇ ನಿಮಿಷ), ಲಿಯೊನ್ ಅಗಸ್ಟಿನ್‌ (47ನೇ ನಿ.), ನಾಮ್‌ಗ್ಯಾಲ್ ಭುಟಿಯಾ (74ನೇ ನಿ.) ಕಾಲ್ಚಳಕ ತೋರಿದರು. ಆರ್ಮಿ ಗ್ರೀನ್‌ನ ಲಾಲ್‌ವಾಮ್‌ಕಿಮಾ (9ನೇ ನಿ.), ವಿಬಿನ್‌ ಟಿ.ವಿ. (89ನೇ ನಿ.) ಗೋಲು ದಾಖಲಿಸಿದರು. ಪಂದ್ಯದ ಆರಂಭದಲ್ಲೇ ಗೋಲು ಗಳಿಸಿದ ಲಾಲ್‌ವಾಮ್‌ಕಿಮಾ ಅವರು ಬಿಎಫ್‌ಸಿ ಮೇಲೆ ಒತ್ತಡ ಹೇರಿದರು. ಮುರಾಂಗ್‌ ಮೂಲಕಬೆಂಗಳೂರು ಸಮಬಲದ ಗೋಲು ದಾಖಲಿಸಿದಾಗ ಆಟ ರಂಗೇರಿತು. ದ್ವಿತೀಯಾರ್ಧದ ಎರಡನೇ ನಿಮಿಷದಲ್ಲೇ ಲಿಯೊನ್ ಗೋಲು ಹೊಡೆದರು. ಬಳಿಕ ನಾಮ್‌ಗ್ಯಾಲ್ ಭುಟಿಯಾ ಯಶಸ್ಸು ಸಾಧಿಸಿದಾಗ ಬಿಎಫ್‌ಸಿ 3–1ರ ಮುನ್ನಡೆ ಸಾಧಿಸಿತು. ಇದಾದ ನಂತರ ಆರ್ಮಿ ಗ್ರೀನ್‌ನ ದೀಪ್‌ ಮಜುಂದಾರ್ ಮತ್ತು ದೀಪಕ್‌ ಸಿಂಗ್‌ ಗೋಲು ಗಳಿಸುವ ಅವಕಾಶ ಸೃಷ್ಟಿಸಿಕೊಂಡರೂ ಬಿಎಫ್‌ಸಿ ಗೋಡೆಯನ್ನು ಭೇದಿಸಲಾಗಲಿಲ್ಲ. ಕೊನೆಯ ಹಂತದಲ್ಲಿ ವಿಬಿನ್ ಗೋಲು ದಾಖಲಿಸಿ ತಮ್ಮ ತಂಡದ ಹಿನ್ನಡೆಯನ್ನು ತಗ್ಗಿಸಿದರು. ಆದರೆ ಸೋಲು ತಪ್ಪಿಸಲಾಗಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.