ಸಂತೋಷ್‌ ಟ್ರೋಫಿ: ಕರ್ನಾಟಕ ಜಯಭೇರಿ ಬೆಂಗಳೂರು: ತೆಲಂಗಾಣ ಎದುರು ಜಯಭೇರಿ ಬಾರಿಸಿದ ಕರ್ನಾಟಕ ತಂಡವು ಸಂತೊಷ್ ಟ್ರೋಫಿ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಅಂತಿಮ ಸುತ್ತು ಪ್ರವೇಶಿಸಿತು. ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಅರ್ಹತಾ ಪಂದ್ಯದಲ್ಲಿ ರಾಜ್ಯ ತಂಡಕ್ಕೆ 2–0ಯಿಂದ ಜಯ ಒಲಿಯಿತು. ಕರ್ನಾಟಕ ತಂಡದ ಎನ್‌. ಸೋಲೈಮಲಾಯಿ ಅವರು 10ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಅವಕಾಶದಲ್ಲಿ ಮೊದಲ ಗೋಲು ದಾಖಲಿಸಿದರು. ಬಳಿಕ ಉಭಯ ತಂಡಗಳು ಗೋಲು ಗಳಿಕೆಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. 74ನೇ ನಿಮಿಷದಲ್ಲಿ ಬಾವು ನಿಷಾದ್‌ ಕಾಲ್ಚಳಕ ತೋರುವುದರೊಂದಿಗೆ ಕರ್ನಾಟಕದ ಗೆಲುವನ್ನು ಬಹುತೇಕ ಖಚಿತಪಡಿಸಿದರು. ಆಡಿದ ಮೂರು ಪಂದ್ಯಗಳನ್ನು ಗೆದ್ದಿರುವ ತಂಡವು ಒಂಬತ್ತು ಪಾಯಿಂಟ್ಸ್‌ನೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿತು. ಮತ್ತೊಂದು ಪಂದ್ಯದಲ್ಲಿ ತಮಿಳು ನಾಡು 1–0ಯಿಂದ ಆಂಧ್ರ ಎದುರು ಗೆದ್ದಿತು. ತಂಡದ ಪರ ಸೆಂಥಮಿಳಿ 39ನೇ ನಿಮಿಷದಲ್ಲಿ ಗೋಲು ಹೊಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.