ಡುರಾಂಡ್‌ ಕಪ್‌: ಸೆಮಿಗೆ ಬಿಎಫ್‌ಸಿ ಕೋಲ್ಕತ್ತ: ಹೆಚ್ಚುವರಿ ಅವಧಿಯ ಕೊನೆಯ ನಿಮಿಷದಲ್ಲಿ ರಾಯ್‌ಕೃಷ್ಣ ತಂದಿತ್ತ ಗೋಲಿನ ನೆರವಿನಿಂದ ಬೆಂಗಳೂರು ಎಫ್‌ಸಿ ತಂಡ, ಡುರಾಂಡ್ ಕಪ್‌ ಫುಟ್‌ಬಾಲ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿತು. ಶನಿವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಬಿಎಫ್‌ಸಿ ತಂಡ, ಒಡಿಶಾ ಎಫ್‌ಸಿ ವಿರುದ್ಧ 2–1 ಗೋಲುಗಳ ರೋಚಕ ಜಯ ದಾಖಲಿಸಿತು. ತುರುಸಿನ ಪೈಪೋಟಿ ನಡೆದ ಪಂದ್ಯದ ನಿಗದಿತ 90 ನಿಮಿಷಗಳ ಆಟದಲ್ಲಿ ಯಾವುದೇ ಗೋಲುಗಳು ಬರಲಿಲ್ಲ. ಇದರಿಂದ ಹೆಚ್ಚುವರಿ ಅವಧಿಯ ಮೊರೆ ಹೋಗಲಾಯಿತು. ಶಿವಶಕ್ತಿ ನಾರಾಯಣನ್‌ (98ನೇ ನಿ.) ಹೆಚ್ಚುವರಿ ಅವಧಿಯಲ್ಲಿ ಗೋಲು ಗಳಿಸಿ ಬಿಎಫ್‌ಸಿಗೆ ಮುನ್ನಡೆ ತಂದಿತ್ತರು. ಅಲ್ಪ ಸಮಯದ ಬಳಿಕ ಒಡಿಶಾ ತಂಡದ ಡಿಯಾಗೊ ಮೌರಿಸಿಯೊ (115ನೇ ನಿ.) ಚೆಂಡನ್ನು ಗುರಿಸೇರಿಸಿ ಪಂದ್ಯವನ್ನು ಸಮಸ್ಥಿತಿಗೆ ತಂದರು. ಪಂದ್ಯ ಕೊನೆಗೊಳ್ಳಲು ಕೆಲವೇ ಸೆಕುಂಡುಗಳು ಇರುವಾಗ ರಾಯ್‌ಕೃಷ್ಣ (120ನೇ ನಿ.) ಅವರು 25 ಯಾರ್ಡ್‌ ದೂರದಿಂದ ಚೆಂಡನ್ನು ನಿಖರವಾಗಿ ಗುರಿಸೇರಿಸಿ ಬಿಎಫ್‌ಸಿ ಗೆಲುವಿಗೆ ಕಾರಣರಾದರು. ಬಿಎಫ್‌ಸಿ ತಂಡ ಡುರಾಂಡ್‌ ಕಪ್‌ನಲ್ಲಿ ಸತತ ನಾಲ್ಕನೇ ಬಾರಿ ಸೆಮಿಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದೆ. ಬೆಂಗಳೂರಿನ ತಂಡ ಸೆಮಿಫೈನಲ್‌ನಲ್ಲಿ ರಾಜಸ್ತಾನ ಎಫ್‌ಸಿ ಅಥವಾ ಹೈದರಾಬಾದ್ ಎಫ್‌ಸಿ ತಂಡವನ್ನು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.