ಪ್ರಧಾನಿ ಕೇರ್ಸ್ ನಿಧಿಗೆ ಎಐಎಫ್ಎಫ್‌ 25 ಲಕ್ಷ ನವದೆಹಲಿ: ಕೊರೊನಾ ವಿರುದ್ಧ ರಾಷ್ಟ್ರ ನಡೆಸುತ್ತಿರುವ ಹೋರಾಟಕ್ಕೆ ಆರ್ಥಿಕ ನೆರವಿನ ಹಸ್ತ ಚಾಚಿರುವ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್ಎಫ್‌) ಪ್ರಧಾನಮಂತ್ರಿಗಳ ಕೇರ್ಸ್‌ ನಿಧಿಗೆ ₹ 25 ಲಕ್ಷ ನೀಡಲು ಮುಂದಾಗಿದೆ. ‘ಕೊರೊನಾ ವೈರಸ್‌ನಿಂದ ಉಂಟಾಗಿರುವ ಕೋವಿಡ್ ಮಹಾಮಾರಿ ತಲ್ಲಣ ಸೃಷ್ಟಿಸಿರುವ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಲೇಬೇಕಾಗಿದೆ. ಹೀಗಾಗಿ ಆರ್ಥಿಕ ನೆರವು ನೀಡಲು ಎಐಎಫ್ಎಫ್‌ ಮುಂದಾಗಿದೆ’ ಎಂದು ಫೆಡರೇಷನ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ‘ಜನರ ಪ್ರೀತಿ, ಬೆಂಬಲ ಮತ್ತು ಸಹಕಾರದಿಂದಾಗಿ ಫುಟ್‌ಬಾಲ್‌ ಕ್ರೀಡೆ ದೇಶದಲ್ಲಿ ಬೆಳೆದಿದೆ. ಈಗ ಎಲ್ಲ ರೀತಿಯಲ್ಲಿ ಜನರ ಋಣ ತೀರಿಸುವ ಸಮಯ ಬಂದಿದೆ. ಒಗ್ಗಟ್ಟು ಪ್ರದರ್ಶಿಸಿ ಪರಸ್ಪರ ಸಹಕರಿಸುತ್ತಿದ್ದರೆ ಈ ಸಂಕಷ್ಟದಿಂದ ಪಾರಾಗಬಹುದಾಗಿದೆ’ ಎಂದು ಫೆಡರೇಷನ್ ಅಧ್ಯಕ್ಷ ಪ್ರಫುಲ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ಹಾವಳಿ ಆರಂಭವಾದಾಗಿನಿಂದ ಫುಟ್‌ಬಾಲ್ ಚಟುವಟಿಕೆಗಳನ್ನು ನಿಲ್ಲಿಸಿದ್ದಎಐಎಫ್ಎಫ್‌ ಕಳೆದ ತಿಂಗಳು ತನ್ನ ಸಿಬ್ಬಂದಿಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸೂಚಿಸಿತ್ತು. ಫುಟ್‌ಬಾಲ್ ಆಟಗಾರರು ವೈಯಕ್ತಿಕವಾಗಿಯೂ ಕೊರೊನಾ ಎದುರಿನ ಹೋರಾಟದಲ್ಲಿ ಕೈಜೋಡಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.