ಜನಾಂಗೀಯ ದ್ವೇಷವು ಅಪಾಯಕಾರಿ: ಚೆಟ್ರಿ ನವದೆಹಲಿ: ಜನಾಂಗೀಯ ತಾರತಮ್ಯದ ಬಗ್ಗೆ ಕಠಿಣ ಕ್ರಮವಿಲ್ಲದೇ ನಿರ್ಲಕ್ಷ್ಯ ಧೋರಣೆ ತಾಳಿದ್ದೇ ಈ ಸಮಸ್ಯೆಗೆ ಕಾರಣ. ಇದು ನೋವಿನ ಸಂಗತಿ ಎಂದು ಭಾರತ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಹೇಳಿದ್ದಾರೆ. ಅಮೆರಿಕದಲ್ಲಿ ಈಚೆಗೆ ಪೊಲೀಸ್ ದೌರ್ಜನ್ಯದಲ್ಲಿ ಆಫ್ರಿಕಾ ಮೂಲದ ಜಾರ್ಜ್ ಫ್ಲಾಯ್ಡ್‌ ಸಾವಿಗೀಡಾದ ನಂತರ ಜನಾಂಗೀಯ ದ್ವೇಷವನ್ನು ವಿರೋಧಿಸಿ ಉಗ್ರ ಪ್ರತಿಭಟನೆಗಳು ನಡೆಯುತ್ತಿವೆ. ಈ ಕುರಿತು ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿರುವ ಚೇಟ್ರಿ, ‘ಬಣ್ಣ, ಜಾತಿ ಮತ್ತು ಧರ್ಮಗಳ ಆಧಾರದಲ್ಲಿ ಯಾವುದೇ ವ್ಯಕ್ತಿಯನ್ನು ಕೀಳಾಗಿ ಕಾಣುವುದು ಅಮಾನವೀಯ. ಅದು ವಿವೇಚನಾರಹಿತ ಧೋರಣೆ. ಅದನ್ನು ಎಂದಿಗೂ ಮಾಡಬಾರದು’ ಎಂದಿದ್ದಾರೆ. ಕ್ರೀಡೆಯಲ್ಲಿಯೂ ವರ್ಣಭೇದ ಇರುವುದರ ಬಗ್ಗೆ ಈಗಾಗಲೇ ಹಲವು ದಿಗ್ಗಜರು ಮಾತನಾಡಿದ್ದಾರೆ. ಕ್ರಿಕೆಟ್‌ನಲ್ಲಿ ತಾವು ಕೂಡ ಇದಕ್ಕೆ ಬಲಿಯಾಗಿದ್ದಾಗಿ ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಡರೆನ್ ಸಾಮಿ ಈಚೆಗೆ ಬಹಿರಂಗಪಡಿಸಿದ್ದಾರೆ. ಇದು ಚರ್ಚೆಗೆ ಕಾರಣವಾಗಿದೆ. ‘ಈ ಕುರಿತು ಜನರಿಗೆ ಸೂಕ್ತ ತಿಳಿವಳಿಕೆ ನೀಡಬೇಕು. ಮಕ್ಕಳು, ಯುವಕರಲ್ಲಿ ಜಾಗೃತಿ ಮೂಡಿಸಬೇಕು. ಸಹಮಾನವರನ್ನು ಗೌರವದಿಂದ ಕಾಣುವಂತೆ ಮಾಡಿದಾಗ ಮಾತ್ರ ಇಂತಹ ಪ್ರಕರಣಗಳು ಕಡಿಮೆಯಾಗುತ್ತವೆ’ ಎಂದು ಚೇಟ್ರಿ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.