ಭಾರತ ತಂಡಕ್ಕೆ ವಿಶ್ವಕಪ್ ಕಿರೀಟ ತೊಡಿಸಿ ನಿರ್ಗಮಿಸಿದ ದ್ರಾವಿಡ್ ಹೇಳಿದ್ದೇನು? ಬ್ರಿಜ್‌ಟೌನ್‌: ಭಾರತ ಕ್ರಿಕೆಟ್ ತಂಡದ ಮುಡಿಗೆ ಟಿ–20 ವಿಶ್ವಕಪ್ ಕಿರೀಟ ತೊಡಿಸಿ ಕೋಚ್ ರಾಹುಲ್ ದ್ರಾವಿಡ್ ನಿರ್ಗಮಿಸಿದ್ದಾರೆ. ಆಟಗಾರನಾಗಿ ಭಾರತೀಯ ಕ್ರಿಕೆಟ್‌ನ ‘ಮಹಾ ಗೋಡೆ’ ಐಸಿಸಿ ಟ್ರೋಫಿ ಜಯಿಸದಿದ್ದರೂ, ಕೋಚ್‌ ಆಗಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಫೈನಲ್‌ನಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಬಳಿಕ ಮಾತನಾಡಿದ ರಾಹುಲ್ ದ್ರಾವಿಡ್‌, ‘ಆಟಗಾರನಾಗಿ ಟ್ರೋಫಿ ಜಯಿಸುವ ಅದೃಷ್ಠ ನನಗಿರಲಿಲ್ಲ. ನಾನು ನನ್ನ ಗರಿಷ್ಠ ಪ್ರಯತ್ನವನ್ನೇ ಮಾಡಿದ್ದೇನೆ. ಅವೆಲ್ಲಾ ಆಟದ ಒಂದು ಭಾಗವಷ್ಟೇ’ ಎಂದು ಹೇಳಿದ್ದಾರೆ. ನನಗೆ ತಿಳಿದಿರುವ ಹಲವು ಆಟಗಾರರು ಟ್ರೋಫಿ ಗೆದ್ದಿಲ್ಲ. ಭಾರತ ತಂಡಕ್ಕೆ ತರಬೇತಿ ನೀಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಠ. ‌‌‌‌ಈ ಯುವಕರು ನಾನು ಟ್ರೋಫಿ ಗೆಲ್ಲುವ ಹಾಗೆ ಮಾಡಿದ್ದಾರೆ. ಇದೊಂದು ಅದ್ಭುತ ಅನುಭವ. ನಾನು ನನ್ನ ಕೆಲಸ ಮಾಡಿದ್ದೇನೆ ಅಷ್ಟೇ’ ಎಂದು ದ್ರಾವಿಡ್ ನುಡಿದಿದ್ದಾರೆ. ‘ಈ ತಂಡಕ್ಕೆ ಕೋಚ್ ಮಾಡಿದ್ದು ಅದ್ಭುತ ಅನುಭವವಾಗಿತ್ತು. ಇಂಥ ಡ್ರೆಸಿಂಗ್ ರೂಮ್‌ನ ಭಾಗವಾಗಿರುವುದು ಖುಷಿ. ಇದು ನನಗೆ ಜೀವಮಾನದ ಸ್ಮೃತಿ. ಇದು ಸಾಧ್ಯವಾಗಿಸಿದ ತಂಡದ ಆಟಗಾರರು ಹಾಗೂ ಸಿಬ್ಬಂದಿಗೆ ನಾನು ಆಭಾರಿ’ ಎಂದು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.