ಏಷ್ಯನ್‌ ಕಪ್‌ನಲ್ಲಿ ಸೋಲು ಅನಿರೀಕ್ಷಿತವಲ್ಲ: ಇಗೊರ್‌ ಸ್ಟಿಮ್ಯಾಚ್‌ ನವದೆಹಲಿ: ‘ಭಾರತ ಫುಟ್‌ಬಾಲ್‌ ತಂಡವು ಏಷ್ಯನ್‌ ಕಪ್‌ ಟೂರ್ನಿಯಲ್ಲಿ ಸೋತಿರುವುದು ನಿರಾಶಾದಾಯಕ. ಆದರೆ, ಅದು ಅನಿರೀಕ್ಷಿತವಲ್ಲ’ ಎಂದು ಭಾರತ ತಂಡದ ಕೋಚ್‌ ಐಗೊರ್‌ ಸ್ಟಿಮ್ಯಾಚ್‌ ಅಭಿಪ್ರಾಯಪಟ್ಟಿದ್ದಾರೆ. ದೋಹಾದಲ್ಲಿ ನಡೆದ ಏಷ್ಯನ್ ಕಪ್‌ ಟೂರ್ನಿಯಲ್ಲಿ ಭಾರತ ತಂಡವು ಸತತ ಮೂರು ಪಂದ್ಯಗಳಲ್ಲಿ ಸೋತಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ‘ನಾನು ನಿಜವಾಗಿಯೂ ವಾಸ್ತವಿಕ ವ್ಯಕ್ತಿ. ಸದ್ಯಕ್ಕೆ ನಾವು ಏಷ್ಯನ್ ಕಪ್‌ ಟೂರ್ನಿಯಲ್ಲಿ ನಿರಂತರವಾಗಿ ಭಾಗವಹಿಸುವುದಕ್ಕೆ ತೃಪ್ತರಾಗಿರಬೇಕು. ಇದನ್ನು ಹೇಳಲು ಕಾರಣ ತುಂಬಾ ಸರಳ ಮತ್ತು ತಾರ್ಕಿಕವಾಗಿದೆ’ ಎಂದು ಹೇಳಿದ್ದಾರೆ. ‘ಎಎಫ್‌ಸಿ ಚಾಂಪಿಯನ್‌ ಲೀಗ್‌ನಲ್ಲಿ ಇಂಡಿಯನ್‌ ಸೂಪರ್‌ ಲೀಗ್‌ನ ಉತ್ತಮ ತಂಡಗಳು ನಿರಂತರವಾಗಿ ಸೋಲುತ್ತಿವೆ. ಎಎಫ್‌ಸಿ ಕಪ್‌ ಕ್ಲಬ್‌ ಟೂರ್ನಿಯಲ್ಲಿ ಭಾರತ ತಂಡವು ಬಾಂಗ್ಲಾದೇಶ ಮತ್ತು ಮಾಲ್ಡೀವ್ಸ್ ತಂಡಗಳ ವಿರುದ್ಧ ಪರಾಭವಗೊಳ್ಳುತ್ತಿದೆ. ಈ ವೇಳೆ ರಾಷ್ಟ್ರೀಯ ತಂಡದಿಂದ ಏಷ್ಯನ್‌ ಕಪ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನಿರೀಕ್ಷಿಸುವುದು ಹೇಗೆ’ ಎಂದು ಪ್ರಶ್ನಿಸಿದ್ದಾರೆ. ಕಾಂಟಿನೆಂಟಲ್ ಟೂರ್ನಿಗಳಲ್ಲಿ ಭಾರತೀಯ ಕ್ಲಬ್‌ಗಳು ಬಹಳ ವಿರಳವಾಗಿ ನಾಕ್‌ಔಟ್ ಸುತ್ತು ಪ್ರವೇಶಿಸುವುದನ್ನು ಉಲ್ಲೇಖಿಸಿರುವ ಅವರು, ಏಷ್ಯನ್ ಕಪ್‌ ಟೂರ್ನಿಯಲ್ಲಿ ಭಾಗವಹಿಸಿದ 24 ದೇಶಗಳ ಪೈಕಿ ವಿಶ್ವದ ಪ್ರಮುಖ ಫುಟ್‌ಬಾಲ್ ಲೀಗ್‌ನಲ್ಲಿ ಒಬ್ಬ ಆಟಗಾರನೂ ಇಲ್ಲದ ಏಕೈಕ ದೇಶ ಭಾರತವಾಗಿದೆ ಎಂದು ಅವರು ಹೇಳಿದರು. ಕಳೆದ ವರ್ಷ ಜುಲೈನಲ್ಲಿ ಬೆಂಗಳೂರಿನಲ್ಲಿ ನಡೆದ ಸ್ಯಾಫ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಗೆದ್ದ ಬಳಿಕ ತನ್ನ ಮತ್ತು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ (ಎಐಎಫ್‌ಎಫ್‌) ಉನ್ನತ ಅಧಿಕಾರಿಗಳ ನಡುವೆ ಯಾವುದೇ ಸಭೆ ನಡೆದಿಲ್ಲ ಎಂದು ಅವರು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.