ಕೇರಳ, ಹಿಮಾಚಲ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಫುಟ್‌ಬಾಲ್‌ ಪಂದ್ಯ ನವದೆಹಲಿ: ಕೇರಳ ಮತ್ತು ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ಪ್ರವಾಹ ಮತ್ತು ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದವರ ಪರಿಹಾರ ಕಾರ್ಯಗಳಿಗೆ ನಿಧಿ ಸಂಗ್ರಹಿಸಲು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ಎರಡು ಸಹಾಯಾರ್ಥ ಫುಟ್‌ಬಾಲ್‌ ಪಂದ್ಯಗಳನ್ನು ಆಯೋಜಿಸಲಿದೆ. ಮಲಪ್ಪುರ ಜಿಲ್ಲೆಯ ಮಂಜೇರಿಯಲ್ಲಿ ಆಗಸ್ಟ್‌ 30ರಂದು ಮೊದಲ ಪಂದ್ಯ ನಡೆಸಲು ಫೆಡರೇಷನ್ ಪ್ರಯತ್ನಿಸುತ್ತಿದೆ. ಈ ಪಂದ್ಯವು ಕೋಲ್ಕತ್ತದ ಮೊಹಮಡನ್ ಸ್ಪೋರ್ಟಿಂಗ್ ಕ್ಲಬ್ ಮತ್ತು ಸೂಪರ್‌ ಲೀಗ್ ಕೇರಳ ಇಲೆವೆನ್ ನಡುವೆ ನಡೆಯಲಿದೆ. ಎರಡನೇ ಸಹಾಯಾರ್ಥ ಪಂದ್ಯವನ್ನು ಲಖನೌದಲ್ಲಿ ಸೆಪ್ಟೆಂಬರ್ 2 ರಂದು ನಡೆಸಲು ಅದು ಉದ್ದೇಶಿಸಿಸಿದೆ. ಸಂಬಂಧಿತ ಕ್ಲಬ್‌ಗಳ ಜೊತೆ ಸಮಾಲೋಚಿಸಿದ ನಂತರ ಇನ್ನಿತರ ರೂಪುರೇಷೆಗಳನ್ನು ಅಂತಿಮಗೊಳಿಸಲಾಗುವುದು. ‘ಈ ಮಾನವೀಯ ಉದ್ದೇಶದ ಸಹಾಯಾರ್ಥ ಪಂದ್ಯದಲ್ಲಿ ಭಾಗಿಯಾಗಲು, ದೇಶದ ಅತ್ಯಂತ ಹಳೆಯ ಕ್ಲಬ್‌ಗಳಲ್ಲಿ ಒಂದಾದ ಮೊಹಮಡನ್ ಸ್ಪೋರ್ಟಿಂಗ್ ತಕ್ಷಣ ಒಪ್ಪಿಕೊಂಡಿರುವುದು ಸಂತಸ ತಂದಿದೆ. ಲಖನೌ ಪಂದ್ಯದಲ್ಲಿ ಭಾಗಿಯಾಗುವ ಇನ್ನೆರಡು ಕ್ಲಬ್‌ಗಳ ಜೊತೆ ಮಾತುಕತೆ ಪ್ರಗತಿಯಲ್ಲಿದೆ’ ಎಂದು ಫೆಡರೇಷನ್ ಅಧ್ಯಕ್ಷ ಕಲ್ಯಾಣ್ ಚೌಬೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.