ಹುರಿಯತ್‌ ನಾಯಕ ಸೇರಿ ಮೂವರನ್ನು ಬಂಧಿಸಿದ ಇ.ಡಿ ಶ್ರೀನಗರ(ಪಿಟಿಐ): ಪಾಕಿಸ್ತಾನದಲ್ಲಿ ವೈದ್ಯಕೀಯ ಸೀಟು ಮಾರಾಟ ಪಕ್ರರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಮತ್ತು ಜಮ್ಮು–ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗೆ ಹಣ ಪೂರೈಕೆ ಮಾಡಿರುವ ಆರೋಪದಡಿ ಹುರಿಯತ್‌ ನಾಯಕ ಸೇರಿದಂತೆ ಮೂವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ‘ಆರೋಪಿಗಳನ್ನು ಫೆಬ್ರವರಿ 20ರವರೆಗೆ ಕಸ್ಟಡಿಯಲ್ಲಿರಿಸಿಕೊಳ್ಳಲು ನ್ಯಾಯಾಲಯ ಅನುಮತಿ ನೀಡಿದೆ‘ ಎಂದು ಇ.ಡಿ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ‘ಬಂಧಿತರಾದ ಹುರಿಯತ್‌ ನಾಯಕ ಮಹಮ್ಮದ್ ಅಕ್ಬರ್‌ ಭಟ್‌, ಫಾತಿಮಾ ಶಾ ಮತ್ತು ಅಹ್ಮದ್‌ ಶೇಖ್‌ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಪೂರೈಸುತ್ತಿದ್ದರು ಮತ್ತು ಜಮ್ಮು–ಕಾಶ್ಮೀರ ವಿದ್ಯಾರ್ಥಿಗಳಿಗೆ ಪಾಕಿಸ್ತಾನದ ಕಾಲೇಜುಗಳಲ್ಲಿ ಎಂಬಿಬಿಎಸ್‌ ಪ್ರವೇಶಾತಿ ಕೊಡಿಸುತ್ತಿದ್ದವರ ಜೊತೆ ಕೈಜೋಡಿಸಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ತಮ್ಮ ವೈಯಕ್ತಿಕ ಖಾತೆಗಳಿಗೆ ಮತ್ತು ಅಲ್‌–ಜಬರ್‌ ಟ್ರಸ್ಟ್‌ನ ಖಾತೆಗೆ ಹಣ ಜಮಾ ಮಾಡಿಸಿಕೊಳ್ಳುತ್ತಿದ್ದ ಬಂಧಿತ ಆರೋಪಿಗಳು, ಆ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸುತ್ತಿದ್ದರು’ ಎಂದು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.