ಚಂಡೀಗಢ ಮೇಯರ್ ರಾಜೀನಾಮೆ: ಎಎಪಿಯ ಮೂವರು ಕೌನ್ಸಿಲರ್‌ಗಳು ಬಿಜೆಪಿ ಸೇರ್ಪಡೆ ಚಂಡೀಗಢ: ಚಂಡೀಗಢ ಮೇಯರ್‌ ಬಿಜೆಪಿಯ ಮನೋಜ್ ಸೋನ್‌ಕರ್‌ ಭಾನುವಾರ ರಾಜೀನಾಮೆ ನೀಡಿದ್ದಾರೆ. ಈ ನಡುವೆ ಎಎಪಿಯ 3 ಕೌನ್ಸಿಲರ್‌ಗಳು ಬಿಜೆಪಿ ಸೇರಿದ್ದಾರೆ. ಮೇಯರ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ಎಎಪಿ ನೀಡಿದ ದೂರು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರುವ ಒಂದು ದಿನದ ಮುನ್ನ ಈ ಬೆಳವಣಿಗೆ ನಡೆದಿದೆ. ‘ಸೋನ್‌ಕರ್‌ ಅವರು ಪಾಲಿಕೆ ಆಯುಕ್ತರಿಗೆ ರಾಜೀನಾಮೆ ಸಲ್ಲಿಸಿದ್ದಾರೆ’ ಎಂದು ಚಂಡೀಗಢ ಬಿಜೆಪಿ ಅಧ್ಯಕ್ಷ ಜತೀಂದರ್ ಪಾಲ್ ಮಲ್ಹೋತ್ರಾ ಹೇಳಿದ್ದಾರೆ. ‘ಕಾಂಗ್ರೆಸ್ ಹಾಗೂ ಎಎಪಿ ನಡುವೆ ಯಾವುದೇ ಮೈತ್ರಿ ಇಲ್ಲ. ಅವರು ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಅವರು ಜನರ ಮುಂದೆ ಬೆತ್ತಲಾಗುತ್ತಿದ್ದಾರೆ’ ಎಂದು ಮಲ್ಹೋತ್ರಾ ಹೇಳಿದ್ದಾರೆ. ಏತನ್ಮಧ್ಯೆ, ಎಎಪಿಯ ಮೂವರು ಕೌನ್ಸಿಲರ್‌ಗಳು ನೇಹಾ, ಪೂನಂ ಹಾಗೂ ಗುರುಚರಣ್‌ ಕಾಲಾ ಅವರು ‍ಪಕ್ಷದ ಹಿರಿಯ ನಾಯಕ ವಿನೋದ್ ತಾವ್ಡೆ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮೂವರು ಎಎಪಿ ಕೌನ್ಸಿಲರ್‌ಗಳು ಪಕ್ಷ ಬದಲಿಸಿದ್ದು, ಮುಂದೆ ನಡೆಯುವ ಮೇಯರ್ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗಲಿದೆ. ಈ ಬೆಳವಣಿಗೆ ನಡೆಯುವುದಕ್ಕೂ ಮುನ್ನ ಪಾಲಿಕೆಯ 35 ಸದಸ್ಯರ ಪೈಕಿ, ಬಿಜೆಪಿಯ 14, ಎಎಪಿಯ 13 ಮಂದಿ ಇದ್ದರು. ಕಾಂಗ್ರೆಸ್‌ ಸಂಖ್ಯಾಬಲ 7. ಶಿರೋಮಣಿ ಅಕಾಲಿದಳ ಒಬ್ಬರು ಕೌನ್ಸಿಲರ್‌ ಹೊಂದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.