ಕೇರಳ: ದೇವಸ್ಥಾನದ ಒಳಗೆ ಸಿ‍ಪಿಐ(ಎಂ) ನಾಯಕನ ಇರಿದು ಕೊಲೆ ಕೋಯಿಕ್ಕೋಡ್‌: ಇಲ್ಲಿನ ಕೊಯಿಲಾಂಡಿ ಸಮೀಪದ ದೇಗುಲದ ಆವರಣದಲ್ಲಿ ಸಿಪಿಐ (ಎಂ) ನಾಯಕರೊಬ್ಬರನ್ನು ನೆರೆ ಮನೆಯ ವ್ಯಕ್ತಿಯೇ ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿ.ವಿ ಸತ್ಯನಾಥ್ (60) ಅವರ ಮೇಲೆ ಅಭಿಲಾಷ್‌ (35) ಎಂಬಾತ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದಾನೆ. ಗುರುವಾರ ರಾತ್ರಿ 10.30ರ ವೇಳೆಗೆ ಈ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ವೈಯಕ್ತಿಕ ಕಾರಣಗಳಿಂದ ಈ ಕೊಲೆ ನಡೆದಿದೆ ಎನ್ನಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 302 ಸೇರಿ ಹಲವು 'ಕಲಂ'ಗಳಡಿ ದೂರು ದಾಖಲಿಸಲಾಗಿದೆ. ಉತ್ಸವ ನಡೆಯುತ್ತಿದ್ದ ವೇಳೆ ದೇವಸ್ಥಾನದ ಒಳಗೇ ಸತ್ಯನಾಥ್‌ ಅವರಿಗೆ ಅಭಿಲಾಷ್ ಇರಿದಿದ್ದ. ಬಳಿಕ ಬಂದು ಪೊಲೀಸ್‌ ಠಾಣೆಗೆ ಶರಣಾಗಿದ್ದಾನೆ. ಆತನನ್ನು ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಏತನ್ಮಧ್ಯೆ ಕೊಯಿಲಾಂಡಿಯಲ್ಲಿ ಸಿಪಿಐ(ಎಂ) ಹರತಾಳಕ್ಕೆ ಕರೆ ನೀಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.