ರಾಜಕೀಯ ಬಿಕ್ಕಟ್ಟು: ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಅಜಿತ್ ಬಣ ನವದೆಹಲಿ: ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷಕ್ಕೆ (ಎನ್‌ಸಿಪಿ) ಸಂಬಂಧಿಸಿದಂತೆ ಚುನಾವಣಾ ಆಯೋಗ ನೀಡಿರುವ ಆದೇಶವನ್ನು ಪ್ರಶ್ನಿಸಿ ಶರದ್‌ ಪವಾರ್‌ ಬಣ, ಮೇಲ್ಮನವಿ ಸಲ್ಲಿಸುವುದಕ್ಕೂ ಮುನ್ನ ಅಜಿತ್‌ ಪವಾರ್‌ ಬಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿರುವ ಅಜಿತ್‌ ಪವಾರ್ ಅವರ ಬಣವೇ ನಿಜವಾದ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ಎಂದು ಚುನಾವಣಾ ಆಯೋಗ ಮಂಗಳವಾರ ಪ್ರಕಟಿಸಿದೆ. ಜೊತೆಗೆ ಪಕ್ಷದ 'ಗಡಿಯಾರ' ಚಿಹ್ನೆಯನ್ನೂ ಅಜಿತ್‌ ಬಣಕ್ಕೆ ನೀಡಿದೆ. ಈ ಆದೇಶವನ್ನು ಶರದ್‌ ಪವಾರ್‌ ಬಣ, ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ. ಹೀಗಾಗಿ, ಅಜಿತ್‌ ಬಣದ ಪರ ವಕೀಲ ಅಭಿಕಲ್ಪ್‌ ಪ್ರತಾಪ್‌ ಸಿಂಗ್‌ ಅವರು 'ಕೇವಿಯಟ್' ಸಲ್ಲಿಸಿದ್ದಾರೆ. ಚುನಾವಣಾ ಆಯೋಗದ ಆದೇಶದ ವಿರುದ್ಧ ಶರದ್‌ ಬಣ ಮೇಲ್ಮನವಿ ಸಲ್ಲಿಸಿದರೆ, ಅವರಿಗೆ ಅನುಕೂಲವಾಗುವಂತಹ ಆದೇಶಗಳು ಬಾರದಂತೆ ಖಾತ್ರಿಪಡಿಸಿಕೊಳ್ಳುವುದು ಹಾಗೂ ತಮ್ಮ ವಾದವನ್ನು ಮೊದಲು ಆಲಿಸುವಂತೆ ಕೋರುವುದು ಅಜಿತ್‌ ಬಣದ ಉದ್ದೇಶವಾಗಿದೆ. ಎನ್‌ಸಿಪಿ ನಾಯಕತ್ವದ ವಿರುದ್ಧ 2023ರ ಜುಲೈನಲ್ಲಿ ಬಂಡಾಯ ಸಾರಿದ್ದ ಅಜಿತ್‌, ತಮ್ಮ ಬೆಂಬಲಿಗ ಎಂಟು ಶಾಸಕರೊಂದಿಗೆ ಶಿವಸೇನಾ (ಏಕನಾಥ ಶಿಂದೆ ಬಣ) ಮತ್ತು ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಮೈತ್ರಿ ಸರ್ಕಾರದೊಂದಿಗೆ ಕೈಜೋಡಿಸಿದ್ದಾರೆ. ಅಜಿತ್‌ ಬಣವನ್ನು ಅಧಿಕೃತ ಎನ್‌ಸಿಪಿ ಎಂದು ಚುನಾವಣಾ ಆಯೋಗ ಘೋಷಿಸಿರುವುದು, ಆ ಪಕ್ಷದ ಸಂಸ್ಥಾಪಕರಾಗಿರುವ ಶರದ್‌ ಪವಾರ್‌ ಅವರಿಗೆ ದೊಡ್ಡ ಹಿನ್ನಡೆಯಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.