ಕಾಂಗ್ರೆಸ್‌ನ ‘ಕಪ್ಪು ಪತ್ರ’ ಅಭಿವೃದ್ಧಿ ಕಾರ್ಯಗಳಿಗೆ ‘ದೃಷ್ಟಿ ಬೊಟ್ಟು’: ಮೋದಿ ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯಗಳ ಕುರಿತಂತೆ ಕಾಂಗ್ರೆಸ್ ಬಿಡುಗಡೆಗೊಳಿಸಿದ ಕಪ್ಪು ಪತ್ರವನ್ನು( )‘ದೃಷ್ಟಿ ಬೊಟ್ಟು’ಎಂದು ಛೇಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಅದು ನಮ್ಮ ಸರ್ಕಾರದ ಸಾಧನೆಗಳ ಮೇಲೆ ನೆಟ್ಟಿರುವ ಕೆಟ್ಟ ದೃಷ್ಟಿಯನ್ನು ನಿವಾರಿಸುತ್ತದೆ ಎಂದು ಹೇಳಿದ್ದಾರೆ. ಯಾವುದೇ ಒಳ್ಳೆಯ ಕೆಲಸವಾದರೂ ನಾವು ಕಪ್ಪು ಬೊಟ್ಟನ್ನಿಟ್ಟು ದೃಷ್ಟಿ ತೆಗೆಯುತ್ತೇವೆ. ಇಂದು ಈ ಗೌರವ ಸಮರ್ಪಿಸಿದ ಮಲ್ಲಿಕಾರ್ಜುನ ಖರ್ಗೆಜೀ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಕಾಂಗ್ರೆಸ್ ಇಂದು ಕಪ್ಪು ಪತ್ರವನ್ನು ಬಿಡುಗಡೆ ಮಾಡಿತ್ತು. ಮೋದಿ ಆಡಳಿತದ ಕಳೆದ 10 ವರ್ಷಗಳು ಬೆಲೆ ಏರಿಕೆ, ನಿರುದ್ಯೋಗ, ಪ್ರಮುಖ ಸಂಸ್ಥೆಗಳ ಬುಡಮೇಲು ಮತ್ತು ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ತಾರತಮ್ಯ ಸೇರಿ ಅನ್ಯಾಯದ ವರ್ಷಗಳಾಗಿದ್ದವು ಎಂದು ಕಾಂಗ್ರೆಸ್ ದೂಷಿಸಿತ್ತು. ಕಳೆದ 10 ವರ್ಷಗಳಲ್ಲಿ ದೇಶವು ಅಭಿವೃದ್ಧಿಯ ಹೊಸ ಎತ್ತರಕ್ಕೆ ತಲುಪಿದ್ದು, ಅದರ ಮೇಲೆ ಬಿದ್ದಿರುವ ಕೆಟ್ಟ ದೃಷ್ಟಿ ನಿವಾರಣೆಗೆ ನಾವು ಇದನ್ನು(ಕಪ್ಪು ಪತ್ರ) ದೃಷ್ಟಿ ಬೊಟ್ಟೆಂದು ಸ್ವೀಕರಿಸುತ್ತೇವೆ ಎಂದು ಮೋದಿ ಹೇಳಿದ್ದಾರೆ. ಹಿರಿಯರಾದ ಖರ್ಗೆ ನಮ್ಮ ಅಭಿವೃದ್ಧಿ ಕಾರ್ಯಗಳಿಗೆ ದೃಷ್ಟಿ ತಾಗದಂತೆ ದೃಷ್ಟಿ ಬೊಟ್ಟು ಇಟ್ಟಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಪ್ರತಿಭಟನಾರ್ಥವಾಗಿ ವಿಪಕ್ಷಗಳ ಕೆಲ ಸದಸ್ಯರು ಕಪ್ಪು ಬಟ್ಟೆ ಧರಿಸಿ ರಾಜ್ಯಸಭೆಗೆ ಆಗಮಿಸಿದ್ದನ್ನೂ ಉಲ್ಲೇಖಿಸಿದ ಮೋದಿ, ಕೆಲ ಸದಸ್ಯರು ಕಪ್ಪು ವಸ್ತ್ರಗಳನ್ನು ಧರಿಸಿ ಸದನಕ್ಕೆ ಆಗಮಿಸಿದಾಗ ಫ್ಯಾಶನ್ ಷೋ ಸಹ ನೋಡಲು ಸಾಧ್ಯವಾಯಿತು ಎಂದಿದ್ದಾರೆ. 2014ಕ್ಕೂ ಮುನ್ನ ಯುಪಿಎ ಅವಧಿಯಲ್ಲಿ ಆರ್ಥಿಕತೆಯ ಅಸಮರ್ಪಕ ನಿರ್ವಹಣೆ ಬಗ್ಗೆ ಶ್ವೇತ ಪತ್ರ ಹೊರಡಿಸುವುದಾಗಿ ಕೇಂದ್ರಸರ್ಕಾರ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ 54 ಪುಟಗಳ ಕಪ್ಪು ಪತ್ರ ಬಿಡುಗಡೆ ಮಾಡಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.