ವಿದ್ಯಾರ್ಥಿ ಕೆನ್ನೆಗೆ ಹೊಡೆಸಿದ ಪ್ರಕರಣ: ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ ನವದೆಹಲಿ: ಹೋಂ ವರ್ಕ್‌ ಮಾಡಲಿಲ್ಲ ಎಂಬ ಕಾರಣಕ್ಕೆ ಮುಸ್ಲಿಂ ವಿದ್ಯಾರ್ಥಿಗೆ ಸಹಪಾಠಿಗಳಿಂದ ಶಿಕ್ಷಕಿಯೊಬ್ಬರು ಕಪಾಳಕ್ಕೆ ಹೊಡೆಸಿದ್ದ ಪ್ರಕರಣದಲ್ಲಿ ತನ್ನ ಆದೇಶ ಪಾಲಿಸದ ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ. ಸರ್ಕಾರವು ಘಟನೆಗೆ ಸಾಕ್ಷಿಯಾದ ವಿದ್ಯಾರ್ಥಿಗಳ ಆಪ್ತ ಸಮಾಲೋಚನೆ ನಡೆಸದೆ ತನ್ನ ನಿರ್ದೇಶನವನ್ನು ಉಲ್ಲಂಘಿಸಿದೆ ಎಂದು ನ್ಯಾಯಪೀಠವು ಕಿಡಿಕಾರಿತು. ಘಟನೆಗೆ ಸಾಕ್ಷಿಯಾದ ವಿದ್ಯಾರ್ಥಿಗಳ ಆಪ್ತ ಸಮಾಲೋಚನೆ ನಡೆಸಬೇಕು ಮತ್ತು ಎರಡು ವಾರಗಳ ಒಳಗಾಗಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಎಸ್‌.ಓಕಾ ಮತ್ತು ಉಜ್ಜಲ್ ಭುಯಾನ್‌ ಅವರನ್ನು ಒಳಗೊಂಡ ನ್ಯಾಯಪೀಠವು ಸೂಚಿಸಿತ್ತು. ‘ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಸೋಷಿಯಲ್‌ ಆ್ಯಂಡ್‌ ಸೈನ್ಸ್‌ನ (ಟಿಐಎಸ್‌ಎಸ್‌) ವರದಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಿದ್ದು, ಸಂತ್ರಸ್ತ ಬಾಲಕ ಮತ್ತು ಇತರ ವಿದ್ಯಾರ್ಥಿಗಳ ಸಮಾಲೋಚನೆಗೆ ಟಿಐಎಸ್‌ಎಸ್ ಆಹ್ವಾನ ನೀಡಿತ್ತು. ಆದರೆ, ಈ ಕುರಿತು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ನ್ಯಾಯಪೀಠ ಹೇಳಿತು. ಬಳಿಕ ವಿಚಾರಣೆಯನ್ನು ಮಾರ್ಚ್‌ 1ಕ್ಕೆ ಮುಂದೂಡಿತು. ಮುಜಾಫ್ಫರ್‌ನಗರದ ಶಾಲೆಯೊಂದರ ವಿದ್ಯಾರ್ಥಿಯೊಬ್ಬ ಹೋಂ ವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕೆ ಸಹಪಾಠಿಗಳಿಂದ ಶಿಕ್ಷಕಿ ಹೊಡೆಸಿದ್ದರು ಮತ್ತು ಕೋಮು ಪ್ರೇರಿತ ಹೇಳಿಕೆಗಳನ್ನು ನೀಡಿ ವಿದ್ಯಾರ್ಥಿಯನ್ನು ನಿಂದಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.