ಹಿಮಾಚಲ ಪ್ರದೇಶ: ಬಜೆಟ್‌ನಲ್ಲಿ ಹಾಲು ಉತ್ಪಾದಕರಿಗೆ ತೆರಿಗೆ ವಿನಾಯಿತಿ– ಸುಖ್ಖು ಶಿಮ್ಲಾ: ಈ ಬಾರಿಯ ಬಜೆಟ್‌ನಲ್ಲಿ ಹಾಲು ಉತ್ಪಾದಕರಿಗೆ ತೆರಿಗೆ ವಿನಾಯಿತಿ ಮತ್ತು ರೈತರ ಆದಾಯ ಹೆಚ್ಚಳ ಮಾಡಲು ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖ್ಖು ಭಾನುವಾರ ಹೇಳಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಫೆ.17 ರಂದು ಬಜೆಟ್‌ ಮಂಡನೆಯಾಗಲಿದೆ. ಹಾಲು ಉತ್ಪಾದಕರೊಂದಿಗೆ ಸಂವಾದ ನಡೆಸಿದ ಸಿಎಂ ಸುಖ್ಖು,‘ಗ್ರಾಮೀಣ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸಲು ಕೃಷಿ ಮತ್ತು ಹಾಲು ಉತ್ಪಾದನೆ ಮಹತ್ವದ ಪಾತ್ರವಹಿಸಲಿದೆ. ಹೀಗಾಗಿ ಸರ್ಕಾರ ಹೊಸ ಯೋಜನಗಳನ್ನು ಜಾರಿಗೆ ತರಲಿದೆ, ಮುಂದಿನ ಎರಡು ವರ್ಷಗಳಲ್ಲಿ ರೈತರ ಆದಾಯ ಏರಿಕೆಯಾಗಲಿದೆ’ ಎಂದು ಹೇಳಿದ್ದಾರೆ. ಸರ್ಕಾರದಿಂದ ಬಿಡುಗಡೆಯಾದ ಹಣ ನೇರವಾಗಿ ರೈತರಿಗೆ ತಲುಪುವಂತೆ ಮಾಡಲು ನೀತಿ–ನಿಯಮಗಳಲ್ಲಿ ಅಮೂಲಾಗ್ರ ಬದಲಾವಣೆ ಮಾಡಲಾಗುತ್ತಿದೆ. ಪಶುಸಂಗೋಪನೆಯನ್ನು ಉತ್ತೇಜಿಸಲು ವಿಶೇಷ ಗಮನಹರಿಸುವ ಮೂಲಕ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲು ನಾವು ಉದ್ದೇಶಿಸಿದ್ದೇವೆ ಎಂದರು. 2022ರ ವಿಧಾನಸಭೆ ಚುನಾವಣೆಯ ವೇಳೆ ಸುಖ್ಖು ಅವರು ಪ್ರತಿ ಲೀಟರ್‌ ಹಾಲಿಗೆ ₹80–100 ನೀಡಿ ರೈತರಿಂದ ಖರೀದಿಸುವುದಾಗಿ ಭರವಸೆ ನೀಡಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಹಾಲಿನ ಸಂಗ್ರಹಣೆ ದರವನ್ನು 2024 ರ ಜನವರಿಯಿಂದ ಅನ್ವಯವಾಗುವಂತೆ ಲೀಟರ್‌ಗೆ ₹31 ರಿಂದ ₹37 ಹೆಚ್ಚಿಸುವುದಾಗಿ ಘೋಷಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.