ಜಮ್ಮು & ಕಾಶ್ಮೀರ: ಪಿಡಿಪಿ ನಾಯಕ ಆರ್ಶಿದ್‌ ಮೆಹಮೂದ್‌ ಖಾನ್‌ ಬಿಜೆಪಿಗೆ ಸೇರ್ಪಡೆ ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ (ಪಿಡಿಪಿ)ದ ಮಾಜಿ ನಾಯಕ ಆರ್ಶಿದ್‌ ಮೆಹಮೂದ್‌ ಖಾನ್‌ ತಮ್ಮ ಬೆಂಬಲಿಗರೊಂದಿಗೆ ಬುಧವಾರ ಬಿಜೆಪಿಗೆ ಸೇರಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಘಟಕದ ಅಧ್ಯಕ್ಷ ರವೀಂದರ್ ರೈನಾ, ಮಾಜಿ ಉಪಮುಖ್ಯಮಂತ್ರಿ ಕವಿಂದರ್ ಗುಪ್ತಾ, ಸಂಸದ ಜುಗಲ್ ಕಿಶೋರ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರ ಸಮ್ಮುಖದಲ್ಲಿ ಮೆಹಮೂದ್ ಖಾನ್ ಪಕ್ಷಕ್ಕೆ ಸೇರಿದರು. ಮೆಹಮೂದ್ ಖಾನ್ ಅವರು ರಜೌರಿ ಜಿಲ್ಲೆಯ ನೌಶೆರಾದ ದಾಂಡೇಸರ್ ಗ್ರಾಮ ಪಂಚಾಯ್ತಿಗೆ ಮೂರು ಸಲ ಸರ್‌ಪಂಚ್‌ ಆಗಿದ್ದರು. 2008ರ ವಿಧಾನಸಭಾ ಚುನಾವಣೆಯಲ್ಲಿ ನೌಶೆರಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಗಳನ್ನು ಘೋಷಿಸುವುದು ಚುನಾವಣಾ ಆಯೋಗದ ವಿಶೇಷಾಧಿಕಾರವಾಗಿದೆ. ಆದರೆ ನಾವು ಯಾವುದೇ ಚುನಾವಣೆಗೆ ಸಿದ್ಧರಿದ್ದೇವೆ. ಇದೇ 20ರಂದು ಪ್ರಧಾನಿ ನರೇಂದ್ರ ಮೋದಿ ಜಮ್ಮುವಿಗೆ ಬರಲಿದ್ದು ಬೃಹತ್‌ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ರವೀಂದರ್ ರೈನಾ ಹೇಳಿದರು. ಪ್ರಧಾನಿಯವರ ಸಮ್ಮುಖದಲ್ಲಿ ವಿವಿಧ ಪಕ್ಷಗಳ ಕೆಲವು ನಾಯಕರು ಬಿಜೆಪಿಗೆ ಸೇರುತ್ತಾರೆ ಎಂಬ ವದಂತಿಗಳ ಬಗ್ಗೆ ಸುದ್ದಿಗಾರರು ಕೇಳಿದಾಗ, ಯಾರು ಬಂದರೂ ನಾವು ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇವೆ ಎಂದು ರೈನಾ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.