ನಿತೀಶ್‌ಗೆ ಸದಾ ಬಾಗಿಲು ತೆರೆದಿರುತ್ತದೆ: ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್‌ ಪಟ್ನಾ: ಇತ್ತೀಚೆಗಷ್ಟೇ ಮಹಾಘಟಬಂಧನ್‌ ತೊರೆದು ಬಿಜೆಪಿ ನೇತೃತ್ವದ ಎನ್‌ಡಿಎಗೆ ಮರಳಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ‘ನಮ್ಮ ಬಾಗಿಲು ಸದಾ ತೆರೆದಿರುತ್ತದೆ’ ಎಂದು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್‌ ಶುಕ್ರವಾರ ತಿಳಿಸಿದರು. ನಿತೀಶ್‌ ಅವರು ಮೈತ್ರಿ ಬದಲಾಯಿಸಿದ ಪರಿಣಾಮ ಆರ್‌ಜೆಡಿ ಅಧಿಕಾರ ಕಳೆದುಕೊಂಡಿದೆ. ಆಗಿನಿಂದಲೂ ಮೌನಕ್ಕೆ ಜಾರಿದ್ದ ಲಾಲು ಅವರು ಈ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. ಎರಡು ವರ್ಷಗಳ ಹಿಂದೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಲಾಲು ಅವರು ಮನೆಯಿಂದ ಹೊರಗೆ ಬರುವುದು ಕಡಿಮೆ. ರಾಜ್ಯಸಭಾ ಚುನಾವಣೆಗೆ ಆರ್‌ಜೆಡಿ ಅಭ್ಯರ್ಥಿಗಳಾದ ಮನೋಜ್‌ ಝಾ ಮತ್ತು ಸಂಜಯ್‌ ಯಾದವ್‌ ಗುರುವಾರ ನಾಮಪತ್ರ ಸಲ್ಲಿಸುವ ವೇಳೆ ಅವರೊಂದಿಗೆ ಲಾಲು ಅವರು ವಿಧಾನಸಭಾ ಆವರಣಕ್ಕೆ ಬಂದಿದ್ದರು. ಈ ವೇಳೆ ಉಭಯ ನಾಯಕರು ಆತ್ಮೀಯವಾಗಿ ಕೈಕುಲುಕಿ ಕುಶಲೋಪರಿ ವಿಚಾರಿಸಿದರು. ಎರಡನೇ ಬಾರಿ ತಮ್ಮಿಂದ ದೂರ ಸರಿದಿರುವ ನಿತೀಶ್‌ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಇನ್ನೂ ಮುಕ್ತರಾಗಿದ್ದೀರಾ ಎಂಬ ಪ್ರಶ್ನಗೆ ಪ್ರತಿಕ್ರಿಯಿಸಿದ ಅವರು, ‘ನಿತೀಶ್‌ ಬಂದಾಗ, ನಾವು ಆ ಕುರಿತು ನೋಡುತ್ತೇವೆ. ಅವರಿಗಾಗಿ ಯಾವಾಗಲೂ ಬಾಗಿಲು ತೆರೆದಿರುತ್ತದೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿರುವ ಜೆಡಿಯು ಮುಖ್ಯ ವಕ್ತಾರ ನೀರಜ್‌ ಕುಮಾರ್‌, ‘ಲಾಲು ಪ್ರಸಾದ್‌ ಅವರು ಬಾಗಿಲುಗಳು ಇನ್ನೂ ತೆರೆದಿವೆ ಎಂದಿದ್ದಾರೆ. ಆದರೆ ಆರ್‌ಜೆಡಿ ಜತೆ ಅಧಿಕಾರ ಹಂಚಿಕೊಂಡಾಗಲೆಲ್ಲ ಅದು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ನಮ್ಮ ನಾಯಕ ನಿತೀಶ್‌ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಹಿಂತಿರುಗುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.