ನ್ಯಾಷನಲ್ ಕಾನ್ಫರೆನ್ಸ್‌ ‘ಇಂಡಿಯಾ’ ಭಾಗ: ಒಮರ್ ಅಬ್ದುಲ್ಲಾ ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್‌ (ಎನ್‌ಸಿ) ಪಕ್ಷವು ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿದ್ದು, ಹಾಗೆಯೇ ಮುಂದುವರೆಯಲಿದೆ ಎಂದು ಎನ್‌ಸಿ ಮುಖಂಡ ಒಮರ್ ಅಬ್ದುಲ್ಲಾ ಗುರುವಾರ ಸ್ಪಷ್ಟಪಡಿಸಿದ್ದಾರೆ. ಪಕ್ಷವು ಜಮ್ಮು ಕಾಶ್ಮೀರ ಮತ್ತು ಲಡಾಖ್‌ನ ಆರು ಲೋಕಸಭಾ ಸ್ಥಾನಗಳ ಪೈಕಿ ಮೂರು ಸ್ಥಾನಗಳಿಗಾಗಿ ಕಾಂಗ್ರೆಸ್ ಜತೆಗೆ ಮಾತುಕತೆಯಲ್ಲಿ ನಿರತವಾಗಿದೆ ಎಂದೂ ಅವರು ತಿಳಿಸಿದ್ದಾರೆ. ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಪಕ್ಷವು ಕೇಂದ್ರಾಡಳಿತ ಪ್ರದೇಶದಲ್ಲಿ ಮುಂಬರುವ ಲೋಕಸಭಾ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಲಿದೆ ಎಂದು ಹೇಳಿದ್ದರು. ಅದರ ಬೆನ್ನಹಿಂದೆಯೇ ಒಮರ್ ಅಬ್ದುಲ್ಲಾ ಅವರು ಸ್ಪಷ್ಟೀಕರಣ ನೀಡಿದ್ದಾರೆ. ‘ಫಾರೂಕ್ ಅಬ್ದುಲ್ಲಾ ಅವರ ಹೇಳಿಕೆಯು ಪಕ್ಷದ ಕಾರ್ಯಕರ್ತರ ಭಾವನೆಯ ಪ್ರತೀಕವಾಗಿವೆ. ಎಲ್ಲ ಆರು ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷವು ಏಕಾಂಗಿ ಹೋರಾಟ ನಡೆಸಬೇಕೆನ್ನುವುದು ಕಾರ್ಯಕರ್ತರ ಬಯಕೆ. ಆದರೆ, ಕೆಲವೊಮ್ಮೆ ದೊಡ್ಡ ಗುರಿ ಸಾಧಿಸಲು ಚಿಕ್ಕ ತ್ಯಾಗ ಮಾಡಬೇಕಾಗುತ್ತದೆ. ಇದೇ ವಾಸ್ತವ’ ಎಂದು ಪಕ್ಷದ ಉಪಾಧ್ಯಕ್ಷರೂ ಅಗಿರುವ ಒಮರ್ ಅಬ್ದುಲ್ಲಾ ತಿಳಿಸಿದ್ದಾರೆ. ‘ಬಿಜೆಪಿಯಿಂದ ಕ್ಷೇತ್ರಗಳನ್ನು ಮರಳಿ ಗೆದ್ದುಕೊಳ್ಳಬೇಕು ಎನ್ನುವುದು ದೊಡ್ಡ ಗುರಿಯಾಗಿದ್ದು, ಕಾಂಗ್ರೆಸ್ ಜತೆ ಸ್ಥಾನ ಹಂಚಿಕೆ ಒಪ್ಪಂದ ಮಾಡಿಕೊಳ್ಳುವುದು ಎನ್‌ಸಿಗೆ ಅಗತ್ಯವಾಗಿದೆ. ನಮ್ಮ ಬಾಗಿಲು ತೆರೆದಿದೆ. ಈಗಾಗಲೇ ಅನೌಪಚಾರಿಕ ಮಾತುಕತೆ ಆರಂಭವಾಗಿದ್ದು, ಮುಂದಿನ ಚರ್ಚೆಗಳಿಗೆ ಹಾದಿ ಮುಕ್ತವಾಗಿದೆ’ ಎಂದು ಅವರು ಹೇಳಿದ್ದಾರೆ. ಜಮ್ಮು ಕಾಶ್ಮೀರ ಮತ್ತು ಲಡಾಖ್‌ನ ಆರು ಲೋಕಸಭಾ ಕ್ಷೇತ್ರಗಳ ಪೈಕಿ ಮೂರು ಬಿಜೆಪಿ ತೆಕ್ಕೆಯಲ್ಲಿದ್ದರೆ, ಇನ್ನು ಮೂರು ಎನ್‌ಸಿ ಹಿಡಿತದಲ್ಲಿವೆ. ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದ ತೃಣಮೂಲ ಕಾಂಗ್ರೆಸ್ ಮತ್ತು ಎಎಪಿ ಕ್ರಮವಾಗಿ ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ನಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.