ಬಾಗಿಲು ಯಾವಾಗಲೂ ತೆರೆದಿರುತ್ತದೆ ಎಂದ ಲಾಲೂಗೆ ನಿತೀಶ್ ಕುಮಾರ್ ಹೇಳಿದ್ದೇನು? ಪಟ್ನಾ: ತಮಗೆ ಯಾವಾಗಲೂ ಬಾಗಿಲು ತೆರೆದಿರುತ್ತದೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಅವರ ಹೇಳಿಕೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿರುತ್ಸಾಹ ವ್ಯಕ್ತಪಡಿಸಿದ್ದಾರೆ. ‘ಮೈತ್ರಿ ಹಾಗೂ ವಿರೋಧ ಪಕ್ಷಗಳ ಜತೆಗೆ ನನಗೆ ಉತ್ತಮ ಸಂಬಂಧ ಇದೆ’ ಎಂದು ನಿತೀಶ್ ಹೇಳಿದ್ದಾರೆ. ಲಾಲೂ ಅವರ ಹೇಳಿಕೆಯನ್ನು ಹಾಗೂ ಉಭಯ ನಾಯಕರೂ ಹಸ್ತಲಾಘವ ಮಾಡಿಕೊಂಡ ಘಟನೆಯನ್ನು ಉಲ್ಲೇಖಿಸಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಅವರನ್ನು ಭೇಟಿಯಾದಗೆಲ್ಲಾ ಹಸ್ತಲಾಘವ ಮಾಡುತ್ತೇನೆ ಅಷ್ಟೇ. ಯಾರು ಏನು ಹೇಳುತ್ತಾರೋ ಅವುಗಳ ಬಗ್ಗೆ ನಾನು ಚಿಂತಿಸುವುದಿಲ್ಲ. ಎಲ್ಲವೂ ಸರಿ ಹೋಗುತ್ತಿರಲಿಲ್ಲ. ಹೀಗಾಗಿ ನಾನು ಅವರನ್ನು (ಆರ್‌ಜೆಡಿ) ಬಿಟ್ಟೆ’ ಎಂದಿದ್ದಾರೆ. ಭವಿಷ್ಯದಲ್ಲಿ ನಿತೀಶ್ ಕುಮಾರ್ ಅವರಿಗೆ ಅವಕಾಶ ಕೊಡುವಿರೇ ಎನ್ನುವ ಪ್ರಶ್ನೆಗೆ ಶುಕ್ರವಾರ ಉತ್ತರಿಸಿದ್ದ ಲಾಲೂ ಪ್ರಸಾದ್, ‘ಬಂದಾಗ ನೋಡಿಕೊಳ್ಳೋಣ. ಬಾಗಿಲುಗಳು ಯಾವಾಗಲೂ ತೆರೆದಿರುತ್ತದೆ’ ಎಂದು ಉತ್ತರಿಸಿದ್ದರು. ಸಂಪುಟ ವಿಸ್ತರಣೆಯ ಬಗ್ಗೆ ಕೇಳಿದಕ್ಕೆ,‘ ಅದು ನಡೆಯಲಿದೆ’ ಎಂದಷ್ಟೇ ಉತ್ತರಿಸಿದ್ದಾರೆ. ಮೂಲಗಳ ಪ್ರಕಾರ ಇನ್ನು 3–4 ದಿನಗಳಲ್ಲಿ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.