ಅಸ್ಸಾಂ; ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರ ಅಪಹರಣ ಶಂಕೆ ತಿನ್ಸುಕಿಯಾ (ಅಸ್ಸಾಂ): ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂನ ಮೂವರು ಕಾರ್ಮಿಕರನ್ನು ಶಂಕಿತ ಉಗ್ರಗಾಮಿಗಳು ಅಪಹರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರ್ಮಿಕರನ್ನು ಪತ್ತೆಹಚ್ಚಲು ಎರಡೂ ರಾಜ್ಯಗಳ ಅಸ್ಸಾಂ ರೈಫಲ್ಸ್ ಪೊಲೀಸರನ್ನು ಒಳಗೊಂಡ ತಂಡವು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಅರೆಸೈನಿಕ ಪಡೆಗಳ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ. ಸ್ಥಳೀಯ ಗಣಿಗಾರಿಕೆ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರ ಅಪಹರಣವಾದ ಶಂಕೆಯಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಜಿತ್ ಗೌರವ್ ಹೇಳಿದ್ದಾರೆ. ನಾಪತ್ತೆಯಾದ ಕಾರ್ಮಿಕರನ್ನು ಗ್ಯಾನ್‌ ತಪಾ, ಲೆಖನ್‌ ಬೊರಾ ಮತ್ತು ಚಂದನ್‌ ನರ್ಜರಿ ಎಂದು ಗುರುತಿಸಲಾಗಿದೆ. ಅವರನ್ನು ಸುರಕ್ಷಿತವಾಗಿ ಕರೆತರಲು ಯತ್ತಿಸುತ್ತಿದ್ದೇವೆ ಎಂದೂ ಅವರು ತಿಳಿಸಿದ್ದಾರೆ. ಅರುಣಾಚಲ ಪ್ರದೇಶದಿಂದ ಬಂದ ವರದಿಗಳ ಪ್ರಕಾರ, ಚಾಂಗ್ಲಾಗ್ ಜಿಲ್ಲೆಯ ಬಸ್ತಿ ಪ್ರದೇಶದ ಕಲ್ಲಿದ್ದಲು ಗಣಿಯಲ್ಲಿ ಕಾರ್ಮಿಕರನ್ನು ಶಂಕಿತ ಉಲ್ಫಾ (ಐ) ಮತ್ತು ಎನ್‌ಎಸ್‌ಸಿಎನ್‌ ಉಗ್ರಗಾಮಿಗಳು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.