ಚಂಡೀಗಢ ಮೇಯರ್ ಚುನಾವಣೆ: ಅನರ್ಹ ಮತಗಳನ್ನೂ ಸೇರಿಸಿ ಮರು ಮತಎಣಿಕೆಗೆ ನಿರ್ದೇಶನ ನವದೆಹಲಿ: ವಿವಾದಕ್ಕೀಡಾಗಿದ್ದ ಚಂಡೀಗಢ ಮೇಯರ್ ಚುನಾವಣೆಯ ಮತ ಎಣಿಕೆಯನ್ನು ಮತ್ತೊಮ್ಮೆ ನಡೆಸಲು ಆದೇಶಿಸಿರುವ ಸುಪ್ರೀಂ ಕೋರ್ಟ್, ಅರ್ನಹಗೊಂಡಿದ್ದ 8 ಮತಗಳನ್ನೂ ಎಣಿಕೆಗೆ ಸೇರಿಸಿಕೊಳ್ಳುವಂತೆ ಮಂಗಳವಾರ ನಿರ್ದೇಶನ ನೀಡಿದೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾ. ಜೆ.ಬಿ.ಪರದಿವಾಲಾ ಹಾಗೂ ನ್ಯಾ. ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಎಎಪಿ ಅಭ್ಯರ್ಥಿ ಕುಲದೀಪ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿ ಅನಿಲ್ ಮಾಸಿ ಅವರೇ ಅಕ್ರಮ ಎಸಗಿದ್ದಾರೆ ಎಂದು ಮನೋಜ್ ಆರೋಪಿಸಿದ್ದರು. ಈ ಪ್ರಕರಣದಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರು ನೇಮಿಸಿದ ನ್ಯಾಯಾಂಗ ಅಧಿಕಾರಿಯು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮತಪತ್ರಗಳ ಮರುಪರಿಶೀಲನೆ ಹಾಗೂ ಇಡೀ ಪ್ರಕ್ರಿಯೆಯ ವಿಡಿಯೊವನ್ನು ಸುಪ್ರೀಂ ಕೋರ್ಟ್‌ನ ಪೀಠವು ವೀಕ್ಷಿಸಲಿದೆ. ‘ಅನರ್ಹಗೊಂಡ ಮತಪತ್ರಗಳನ್ನು ವೀಕ್ಷಿಸಲು ಪೀಠವು ಇಚ್ಛಿಸಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ವಿಚಾರಣೆಯು ಇನ್ನೂ ಪ್ರಗತಿಯಲ್ಲಿದೆ. ‘ಇಡೀ ಪ್ರಕ್ರಿಯೆಯಲ್ಲಿ ಸದಸ್ಯರ ಖರೀದಿ ಪ್ರಯತ್ನ ನಡೆದಿರುವ ಸಾಧ್ಯತೆ ಇರಬಹುದು’ ಎಂದು ಕಳವಳ ವ್ಯಕ್ತಪಡಿಸಿರುವ ನ್ಯಾಯಾಲಯವು, ಮತಪತ್ರಗಳನ್ನು ಮರುಪರಿಶೀಲಿಸಲಿದೆ. ಹೊಸದಾಗಿ ಮತದಾನಕ್ಕೆ ಆದೇಶಿಸುವ ಬದಲು, ಈಗಾಗಲೇ ಚಲಾವಣೆಗೊಂಡ ಮತಗಳ ಮರು ಎಣಿಕೆಯನ್ನು ನಡೆಸಬೇಕು’ ಎಂದಿದೆ. ಜ. 30ರಂದು ನಡೆದಿದ್ದ ಚಂಡೀಗಢ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಜಯಸಾಧಿಸಿತ್ತು. ಇದರಲ್ಲಿ 8 ಮತಗಳು ಅನರ್ಹಗೊಂಡಿದ್ದವು. ಇದರಲ್ಲಿ ಎಎಪಿ–ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕುಲದೀಪ್ ಕುಮಾರ್ ಪರಾಭವಗೊಂಡಿದ್ದ ಬೆನ್ನಲ್ಲೇ, ಮತಪತ್ರಗಳನ್ನು ವಿರೂಪಗೊಳಿಸಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು. 24 ಮತಗಳಲ್ಲಿ 8 ಮತಗಳು ಅನರ್ಹಗೊಂಡಿದ್ದವು. 16 ಮತಗಳಲ್ಲಿ ಮನೋಜನ್ ಸೋನಕರ್ ಅವರು 12 ಮತಗಳನ್ನು ಪಡೆಯುವ ಮೂಲಕ ಜಯ ಸಾಧಿಸಿದರು. ನಂತರ ಸೋನಕರ್ ಅವರು ತಮ್ಮ ಮೇಯರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದರ ನಡುವೆಯೇ ಎಎಪಿಯ ಮೂವರು ಪಾಲಿಕೆ ಸದಸ್ಯರು ಬಿಜೆಪಿ ಸೇರಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.