ಸಂದೇಶ್‌ಖಾಲಿ ಹಿಂಸಾಚಾರ: ಬೃಂದಾ ಕಾರಟ್‌, ಸುವೇಂದು ಅಧಿಕಾರಿಯನ್ನು ತಡೆದ ಪೊಲೀಸರು ಧಾಮಖಾಲಿ(ಪ.ಬಂಗಾಳ): ಹಿಂಸಾಚಾರ ಪೀಡಿತ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಗೆ ತೆರಳದಂತೆ ಸಿಪಿಐ(ಎಂ)ನ ಹಿರಿಯ ನಾಯಕಿ ಬೃಂದಾ ಕಾರಟ್‌, ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರನ್ನು ಮಂಗಳವಾರ ಪೊಲೀಸರು ತಡೆದಿದ್ದಾರೆ. ಸಂದೇಶಖಾಲಿ ಭೇಟಿಗೆ ಅವಕಾಶ ನೀಡಿ ಕಲ್ಕತ್ತಾ ಹೈಕೋರ್ಟ್‌ ಆದೇಶ ಹೊರಡಿಸಿದ ಮೇಲೂ ಅಲ್ಲಿಗೆ ತೆರಳದಂತೆ ಪೊಲೀಸರು ತಡೆದಿದ್ದಾರೆ ಎಂದು ಬಿಜೆಪಿ ಸಂಸದ ಸುವೇಂದು ಅಧಿಕಾರಿ ಕಿಡಿಕಾರಿದ್ದಾರೆ. ‘ಕಲ್ಕತ್ತಾ ಹೈಕೋರ್ಟ್‌ನ ಆದೇಶವನ್ನು ಪೊಲೀಸರು ಉಲ್ಲಂಘಿಸಿದ್ದಾರೆ. ಸ್ಥಳದಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗೀಯ ಪೀಠದ ಮೆಟ್ಟಿಲೇರಿದೆ. ಇದೆಲ್ಲದರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು’ ಎಂದು ಸುವೇಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೃಂದಾ ಕಾರಟ್‌ ಅವರನ್ನು ಧಮಖಾಲಿಯ ಫೆರ್ರಿ ಘಾಟ್‌ ಬಳಿ ತಡೆದ ಪೊಲೀಸರು, ಶಾಂತಿ ಕದಡುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾರಟ್‌, ‘ಟಿಎಂಸಿ ನಾಯಕರಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗಲೇ ಶಾಂತಿ ಭಂಗವಾಗಿದೆ. ಈಗ ನಡೆಯುತ್ತಿರುವುದು ನ್ಯಾಯಕ್ಕಾಗಿ ಹೋರಾಟ’ ಎಂದಿದ್ದಾರೆ. ಟಿಎಂಸಿ ನಾಯಕ ಷಹಜಹಾನ್‌ ಮತ್ತು ಆತನ ಬೆಂಬಲಿಗರು ತಮ್ಮ ಭೂಮಿಯನ್ನು ಕಬಳಿಸಿದ್ದಾರೆ ಹಾಗೂ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿರುವ ಸಂದೇಶ್‌ಖಾಲಿಯ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. | (@) , 24 , #. ( - ://./n147TvqRQz) ../XBt9dtAUk0 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.