ಕಮಲ್‌ನಾಥ್‌ ಬಿಜೆಪಿಗೆ ಹೋಗಲ್ಲ: ಭನ್ವರ್‌ ಜಿತೇಂದ್ರ ಸಿಂಗ್‌ ಭೋಪಾಲ್‌: ‘ನಮ್ಮ ಪಕ್ಷದ ಹಿರಿಯ ನಾಯಕ ಕಮಲ್‌ನಾಥ್‌ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಗಳೆಲ್ಲ ಸುಳ್ಳು. ಇಂಥ ಊಹಾಪೋಹಗಳು ಕೇಸರಿ ಪಾಳಯ ಮತ್ತು ಮಾಧ್ಯಮಗಳ ಸೃಷ್ಟಿ’ ಎಂದು ಮಧ್ಯಪ್ರದೇಶ ಎಐಸಿಸಿ ಉಸ್ತುವಾರಿ ಭನ್ವರ್‌ ಜಿತೇಂದ್ರ ಸಿಂಗ್‌ ಅವರು ಮಂಗಳವಾರ ಹೇಳಿದ್ದಾರೆ. ಕಮಲ್‌ನಾಥ್ ಅವರ ಮುಂದಿನ ನಡೆಯ ಬಗ್ಗೆ ಕುತೂಹಲ ಹೆಚ್ಚಾಗುತ್ತಿದ್ದು, ರಾಜ್ಯ ಕಾಂಗ್ರೆಸ್‌ನಲ್ಲಿ ಆತಂಕ ಹೆಚ್ಚಾಗುತ್ತಿರುವ ಹೊತ್ತಿನಲ್ಲೇ ಜಿತೇಂದ್ರ ಸಿಂಗ್‌ ಅವರು ಮಂಗಳವಾರ ಭೋಪಾಲ್‌ಗೆ ಬಂದಿದ್ದಾರೆ. ರಾಹುಲ್‌ ಗಾಂಧಿ ನೇತೃತ್ವದ ‘ಭಾರತ್‌ ಜೋಡೊ ನ್ಯಾಯ ಯಾತ್ರೆ’ಯು ಮಧ್ಯಪ್ರದೇಶಕ್ಕೆ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಸಲಾಗಿರುವ ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ. ಯಾತ್ರೆಯು ಫೆಬ್ರುವರಿ ಬದಲಾಗಿ ಮಾರ್ಚ್‌ನಲ್ಲಿ ರಾಜ್ಯವನ್ನು ಪ್ರವೇಶಿಸುತ್ತಿರುವುದರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾತ್ರೆಯು ರಾಜ್ಯಕ್ಕೆ ಬರುತ್ತಿದ್ದು, ಅದು ಎಲ್ಲೂ ನಿಲ್ಲುವುದಿಲ್ಲ. ವೇಳಾಪಟ್ಟಿಯ ಪ್ರಕಾರವೇ ಯಾತ್ರೆ ನಡೆಯಲಿದೆ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.