ನಾನು ಪಿಡಿಪಿ ಜತೆ ಇಲ್ಲ: ಮುಜಾಫರ್‌ ಹುಸೇನ್‌ ಬೇಗ್‌ ಶ್ರೀನಗರ: ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿಯ (ಪಿಡಿಪಿ) ಸ್ಥಾಪಕ ಸದಸ್ಯರೂ ಆದ ಮಾಜಿ ಉಪ ಮುಖ್ಯಮಂತ್ರಿ ಮುಜಾಫರ್‌ ಹುಸೇನ್‌ ಬೇಗ್‌ ಅವರು ಮಂಗಳವಾರ ಜಮ್ಮುವಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ್‍ಯಾಲಿಯಲ್ಲಿ ಪಾಲ್ಗೊಂಡರು. ಇದೇ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಬೇಗ್‌, ‘ನಾನು ಪಿಡಿಪಿ ಜತೆ ಇಲ್ಲ. ಒಂದು ವೇಳೆ ಅವರು ನನ್ನನ್ನು ಸೇರಲು ಕೇಳಿದರೆ, ವೈಯಕ್ತಿಕ ಹಿತಾಸಕ್ತಿಗಿಂತ ರಾಷ್ಟ್ರೀಯ ಹಿತಾಸಕ್ತಿಯ ಬಗ್ಗೆ ಚಿಂತಿಸುವಂತೆ ಅವರಿಗೆ ಹೇಳುತ್ತೇನೆ’ ಎಂದರು. 2020ರ ನವೆಂಬರ್‌ನಲ್ಲಿ ಪಕ್ಷದಿಂದ ಹೊರ ನಡೆದಿದ್ದ ಅವರು ತನ್ನ ಪತ್ನಿಯೊಂದಿಗೆ ಜನವರಿ 7ರಂದು ಪಿಡಿಪಿ ಮರು ಸೇರ್ಪಡೆಯಾಗಿದ್ದರು. ಆಹ್ವಾನದ ಮೇರೆಗೆ ಪ್ರಧಾನಿ ರ್‍ಯಾಲಿಯಲ್ಲಿ ಭಾಗವಹಿಸಿದ್ದೇನೆ. ಮೋದಿ ಅವರ ಮಾತು ಕೇಳಲು ಇಲ್ಲಿಗೆ ಬಂದಿದ್ದೇನೆ ಎಂದ ಅವರು, ‘ನಾನು ಬಿಜೆಪಿ ಸೇರಲು ಇಲ್ಲಿಗೆ ಬಂದಿಲ್ಲ. ಬಿಜೆಪಿಗೆ ಸೇರುವಂತೆ ಯಾರೂ ನನ್ನನ್ನು ಕರೆದಿಲ್ಲ’ ಎಂದು ಪ್ರತಿಕ್ರಿಯಿಸಿದರು. ಆಹ್ವಾನ ಬಂದರೆ ಬಿಜೆಪಿ ಸೇರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆಹ್ವಾನ ಬರಲಿ ನೋಡೋಣ ಎಂದರು. ಮೋದಿ ‌ಅಧಿಕಾರಕ್ಕೆ ಬಂದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ 500 ಪಟ್ಟು ಹೆಚ್ಚು ಸುಧಾರಣೆ ಆಗಿದೆ ಎಂದ ಅವರು, ಮುಂಬರುವ ಚುನಾವಣೆಯಲ್ಲಿ ಕಾಶ್ಮೀರದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.