‘ಇಂಡಿಯಾ’ ಬಣಕ್ಕೆ ಎಂಎನ್‌ಎಂ ಸೇರ್ಪಡೆಗೊಂಡಿಲ್ಲ: ಕಮಲ್ ಹಾಸನ್ ಚೆನ್ನೈ: ‘ರಾಷ್ಟ್ರದ ಬಗ್ಗೆ ನಿಸ್ವಾರ್ಥವಾಗಿ ಯೋಚಿಸುವ ಯಾವುದೇ ಬಣವನ್ನು ನಮ್ಮ ಪಕ್ಷ ‘ಮಕ್ಕಳ್ ನೀದಿ ಮೈಯಂ’(ಎಂಎನ್‌ಎಂ) ಬೆಂಬಲಿಸುತ್ತದೆ’ ಎಂದು ನಟ, ಎಂಎನ್‌ಎಂ ಪಕ್ಷದ ಮುಖಂಡ ಕಮಲ್ ಹಾಸನ್ ಹೇಳಿದ್ದಾರೆ. ಪಕ್ಷದ ಏಳನೇ ವಾರ್ಷಿಕೋತ್ಸವದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್ ಹಾಸನ್‌, ಮೈತ್ರಿ ಕುರಿತಂತೆ ಚರ್ಚೆಗಳು ನಡೆಯುತ್ತಿವೆ ಎಂಬ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಇಂಡಿಯಾ ಮೈತ್ರಿಕೂಟಕ್ಕೆ ಎಂಎನ್‌ಎಂ ಸೇರ್ಪಡೆಗೊಳ್ಳುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಮಲ್ ಹಾಸನ್‌, ‘ಈವರೆಗೆ ‘ಇಂಡಿಯಾ’ ಮೈತ್ರಿಕೂಟಕ್ಕೆ ನಮ್ಮ ಪಕ್ಷ ಸೇರ್ಪಡೆಗೊಂಡಿಲ್ಲ. ಪಕ್ಷ ರಾಜಕಾರಣವನ್ನು ಬಿಟ್ಟು ರಾಷ್ಟ್ರದ ಬಗ್ಗೆ ಯೋಚಿಸಬೇಕಾದ ಸಮಯವಿದು. ನಮ್ಮ ಪಕ್ಷ ರಾಷ್ಟ್ರದ ಬಗ್ಗೆ ನಿಸ್ವಾರ್ಥವಾಗಿ ಯೋಚಿಸುವ ಪಕ್ಷದ ಭಾಗವಾಗಲಿದೆ’ ಎಂದರು. ಲೋಕಸಭಾ ಚುನಾವಣೆ ಹಿನ್ನೆಲೆ ಡಿಎಂಕೆ ಜೊತೆ ಮೈತ್ರಿ ಮಾತುಕತೆಯಲ್ಲಿ ಎಂಎನ್‌ಎಂ ತೊಡಗಿದೆ ಎಂಬ ವದಂತಿ ಹರಡಿದ್ದು, ಈ ಬಗ್ಗೆ ಕಮಲ್ ಹಾಸನ್‌ ಸ್ಪಷ್ಟನೆ ನೀಡಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.