ಲೋಕಸಭೆ ಚುನಾವಣೆ: ಯುಪಿಯಲ್ಲಿ ಕಾಂಗ್ರೆಸ್- ಮೈತ್ರಿಗೆ ಪ್ರಿಯಾಂಕಾ ಮಧ್ಯಸ್ಥಿಕೆ? ನವದೆಹಲಿ: ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಡ್ರಾ ಅವರು ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್‌ ಯಾದವ್ ಜೊತೆ ದೂರವಾಣಿ ಮಾತುಕತೆ ನಡೆಸಿದ್ದು, ಲೋಕಸಭಾ ಚುನಾವಣೆಯ ಸ್ಥಾನ ಹಂಚಿಕೆ ಕುರಿತು ನಿರ್ಧಾರಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಉತ್ತರ ಪ್ರದೇಶದ ಶ್ರಾವಸ್ತಿ ಕ್ಷೇತ್ರದಲ್ಲಿ ಸ್ಪರ್ಧಿಸಲು ತನಗೆ ಅವಕಾಶ ಕೊಡಬೇಕು ಎಂದು ಕಾಂಗ್ರೆಸ್‌ ಕೇಳಿಕೊಂಡಿದೆ. ಉಳಿದಂತೆ ಉಭಯ ಪಕ್ಷಗಳ ನಡುವೆ ಹೊಂದಾಣಿಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಸೀತಾಪುರ, ಬಾರಾಬಂಕಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧಿಸುವ ಸಾಧ್ಯತೆ ಇದೆ ಎಂದೂ ಹೇಳಿವೆ. ಕಾನ್ಪುರ, ವಾರಾಣಸಿ, ಸಹಾರಣಪುರ, ಅಮ್ರೋಹಾ, ಫತೇಪುರ ಸಿಖ್ರಿ, ಝಾಂಸಿ ಸೇರಿದಂತೆ ಒಟ್ಟು 16ರಿಂದ 18 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಸ್ಪರ್ಧಿಸುವ ಅವಕಾಶ ಸಿಗಲಿದೆ ಎನ್ನುವುದು ದೂರವಾಣಿ ಸಂಭಾಷಣೆಯಿಂದ ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಹದಿನೇಳು ಸ್ಥಾನಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ ಒಪ್ಪಿದರಷ್ಟೆ ‘ಇಂಡಿಯಾ’ ಒಕ್ಕೂಟದಲ್ಲಿ ಉಳಿದು, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಎಸ್‌ಪಿ ಸೋಮವಾರ ಹೇಳಿತ್ತು. ಮಂಗಳವಾರ ತನ್ನ ಉಮೇದುವಾರರ ಮೂರನೇ ಪಟ್ಟಿಯನ್ನು ಅದು ಬಿಡುಗಡೆ ಮಾಡಿತ್ತು. ಹೊಂದಾಣಿಕೆ ವಿಷಯದಲ್ಲಿ ಕಾಂಗ್ರೆಸ್‌ ಬೇಗ ಸ್ಪಂದಿಸದಿದ್ದರೆ ಮೈತ್ರಿಯೊಂದ ಹೊರಬಂದು ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಎಸ್‌ಪಿ ನೀಡಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.