‘ಬಿಜೆಪಿಯ ಅಧರ್ಮ ತಡೆಯಲು ದೇವರೇ ಬಂದಂತಾಗಿದೆ’ ನವದೆಹಲಿ: ಚಂಡೀಗಢದ ಮೇಯರ್ ಚುನಾವಣೆಯ ಫಲಿತಾಂಶವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖಿಸಿ ಎಎಪಿ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬುಧವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಗವದ್ಗೀತೆಯನ್ನು ಉಲ್ಲೇಖಿಸಿ, ‘ಬಿಜೆಪಿಯ ಅಧರ್ಮವನ್ನು ತಡೆಯುವುದಕ್ಕಾಗಿ ದೇವರು ಮಧ್ಯಪ್ರವೇಶ ಮಾಡಲು ನಿರ್ಧರಿಸಿದ್ದಾನೆ’ ಎಂದು ಹೇಳಿದರು. ‘ರಾಮ, ಕೃಷ್ಣ, ಶಿವ–ಪಾರ್ವತಿ ಎಲ್ಲ ದೇವರ ಭಕ್ತರೂ ದೇಶದೊಂದಿಗಿದ್ದಾರೆ. ಕೊನೆಗೆ ಬಿಜೆಪಿಯ ಅಧರ್ಮ ಅಂತ್ಯಗೊಂಡು, ಧರ್ಮ ಉಳಿಯುತ್ತದೆ’ ಎಂದು ಕೇಜ್ರಿವಾಲ್ ಹೇಳಿದರು. ‘ದೇವರೇ ಸಿಜೆಐ ರೂಪದಲ್ಲಿ ತೀರ್ಪು ನೀಡಿರುವಂತೆ ಭಾಸವಾಗುತ್ತಿದೆ’ ಎಂದು ಕೇಜ್ರಿವಾಲ್ ಹೇಳಿದರು. ತೀರ್ಪಿಗಾಗಿ ಸುಪ್ರೀಂ ಕೋರ್ಟ್ ಮತ್ತು ಮುಖ್ಯ ನ್ಯಾಯಮೂರ್ತಿಗೆ (ಸಿಜೆಐ) ಧನ್ಯವಾದ ತಿಳಿಸಿದ ಕೇಜ್ರಿವಾಲ್, ‘ಇದು ದೇಶದ ಪ್ರಜಾಪ್ರಭುತ್ವವನ್ನು ಉಳಿಸಿತು’ ಎಂದು ಹೇಳಿದರು. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಕೇಸರಿ ಪಕ್ಷವು ಚುನಾವಣೆ ಗೆಲ್ಲಲು ಏನು ಬೇಕಾದರೂ ಮಾಡುತ್ತದೆ. ಅದು ಶಾಸಕರನ್ನು ಬೇಟೆಯಾಡಿ, ಸರ್ಕಾರಗಳನ್ನು ಉರುಳಿಸುವುದರಲ್ಲಿ ತೊಡಗಿದೆ’ ಎಂದು ಆರೋಪಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.