ದೇವಬಂದ್‌ ವಿರುದ್ಧ ಎಫ್‌ಐಆರ್‌ಗೆ ಸೂಚನೆ ನವದೆಹಲಿ: ದಾರುಲ್ ಉಲೂಮ್ ದೇವಬಂದ್ ತನ್ನ ವೆಬ್‌ಸೈಟ್‌ನಲ್ಲಿ ಆಕ್ಷೇಪಾರ್ಹ ವಿಷಯಗಳನ್ನು ಪ್ರಕಟಿಸಿರುವುದು ಕಂಡುಬಂದಿದೆ ಎಂಬ ಆರೋಪ ಇದ್ದು, ಆ ಸಂಸ್ಥೆಯ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣೆಗಾಗಿನ ರಾಷ್ಟ್ರೀಯ ಆಯೋಗವು (ಎನ್‌ಸಿಪಿಸಿಆರ್) ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ದೇಶದ ಖ್ಯಾತ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಗಳ ಪೈಕಿ ದೇವಬಂದ್ ಕೂಡ ಒಂದು. ಉತ್ತರ ಪ್ರದೇಶದ ಸಹರಾನಪುರ ಜಿಲ್ಲೆಯ ಹಿರಿಯ ಪೊಲೀಸ್‌ ಸೂಪರಿಂಟೆಂಡೆಂಟ್ (ಎಸ್‌ಎಸ್‌ಪಿ) ಅವರಿಗೆ ಪತ್ರವೊಂದನ್ನು ಬರೆದಿರುವ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕನುಂಗೊ ಅವರು, ದೇವಬಂದ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಫತ್ವಾ ಒಂದರ ಬಗ್ಗೆ ಆಯೋಗದ ಕಳವಳವನ್ನು ವಿವರಿಸಿದ್ದಾರೆ. ಈ ಫತ್ವಾ, ‘ಗಜ್ವಾ ಎ ಹಿಂದ್‌’ ಪರಿಕಲ್ಪನೆಯ ಬಗ್ಗೆ ಇದೆ, ಇದು ‘ಭಾರತದ ಮೇಲಿನ ಆಕ್ರಮಣದ ಸಂದರ್ಭದಲ್ಲಿ ಹುತಾತ್ಮ ಆಗುವುದನ್ನು’ ವೈಭವೀಕರಿಸುತ್ತದೆ ಎಂಬ ಆರೋಪ ಇದೆ. ‘ಈ ಫತ್ವಾ ಮಕ್ಕಳನ್ನು ತಮ್ಮದೇ ದೇಶದ ವಿರುದ್ಧ ದ್ವೇಷಕ್ಕೆ ಒಡ್ಡುತ್ತಿದೆ, ಅವರಿಗೆ ಅನಗತ್ಯವಾಗಿ ಮಾನಸಿಕ ಹಾಗೂ ದೈಹಿಕ ತೊಂದರೆ ಉಂಟುಮಾಡುತ್ತಿದೆ’ ಎಂದು ಕನುಂಗೊ ಅವರು ಪತ್ರದಲ್ಲಿ ಹೇಳಿದ್ದಾರೆ. ಭಾರತೀಯ ದಂಡ ಸಂಹಿತೆ ಹಾಗೂ ಬಾಲನ್ಯಾಯ ಕಾಯ್ದೆ 2015ರ ಅಡಿಯಲ್ಲಿ ದೇವಬಂದ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಸೂಚಿಸಿದ್ದಾರೆ. ಕೈಗೊಂಡ ಕ್ರಮ ಏನು ಎಂಬ ಬಗ್ಗೆ ಮೂರು ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಆಯೋಗವು ಹೇಳಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.